Thursday, July 24, 2008

ಸೌಂದರ್ಯ

– ಸಮಸ್ಯೆಯನ್ನು ದೂರ ಮಾಡುವಲ್ಲಿ ಸಹಕಾರಿಯೆ?

ಸೌಂದರ್ಯದ ಬಗ್ಗೆ ನೀನು ಏನು ಹೇಳುತ್ತೀಯ ಅಂತ ನನಗೆ curiousity ಇದೆ ಅಂತ ನನ್ನ ಗೆಳೆಯರಲ್ಲೊಬ್ಬರು ಹೇಳಿದರು. ಹಾಗಾಗಿ ಈ ಬರಹ...

ಸೌಂದರ್ಯ ಎನ್ನುವುದು ಇರುವವನಿಗಿಂತ ನೋಡುವವನ ಮೇಲೆ ಅವಲಂಬಿತವಾದದ್ದು. ಸೌಂದರ್ಯವನ್ನು ಬಾಹ್ಯ ಮತ್ತು ಆಂತರಿಕವೆಂದು ವಿಂಗಡಿಸಬಹುದು. ಬಾಹ್ಯ ಸೌಂದರ್ಯದ ಬಗ್ಗೆ ಹೇಳುವುದಾದರೆ, ಒಬ್ಬ ಮನುಷ್ಯ ಯಾರಿಗಾದರೂ ಕುರೂಪಿಯಾಗಿ ಕಾಣಬಹುದು. ಆದರೆ ಆತನ ತಾಯಿ/ಹೆಂಡತಿಗೆ ಆತ ಸುಂದರನಾಗಿರುವ ಸಾಧ್ಯತೆಯೇ ಹೆಚ್ಚು. “ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು” ಎನ್ನುವ ಮಾತಿದೆ. ಒಬ್ಬನ ಆಂತರಿಕ ಸೌಂದರ್ಯವನ್ನು ಅಳೆಯುವುದು ಕಷ್ಟವೆ. ಅದನ್ನು ಅಳೆಯಬೇಕೆಂದರೆ ಅದಕ್ಕೆ ಸರಿಯಾದ ಸನ್ನಿವೇಶ ಸ್ರಷ್ಟಿಯಾಗಬೇಕು. ಆಗಲೇ ಆಂತರಿಕ ಸೌಂದರ್ಯವೆನ್ನುವುದು ಪ್ರಕಟಗೊಳ್ಳುವುದು. ಹಾಗಾಗಿ ಹೆಚ್ಚಿನವರು ಬಾಹ್ಯ ಸೌಂದರ್ಯಕ್ಕೇ ಗಂಟು ಬಿದ್ದಿರುತ್ತಾರೆ. ಯಾವುದೇ ಮನುಷ್ಯ ಮತ್ತೊಬ್ಬ ಮನುಷ್ಯನ ಮನಸ್ಸಿಗೆ ಹಿಡಿಸಬೇಕೆನ್ನಿಸಿದರೆ ಮೇಲೆ ಹೇಳಿದ ಎರಡರಲ್ಲೊಂದು ಸೌಂದರ್ಯವಿರಲೇಬೇಕು. ಅವಿಲ್ಲವೆಂದರೆ ಆತ ತನ್ನ ಜೀವನವನ್ನು ಬದುಕುತ್ತಿಲ್ಲ; ಅದರ ಬದಲಾಗಿ ತನಗಿರುವ ಅಮೂಲ್ಯ ಸಮಯವನ್ನು ತಳ್ಳುತ್ತಿದ್ದಾನೆ ಎಂದೇ ಅರ್ಥ. ನನಗೆಲ್ಲೋ ಓದಿದ ನೆನಪು; ಒಬ್ಬ ಮನುಷ್ಯ ಸುಂದರವಾಗಿ ಕಾಣಬೇಕೆಂದರೆ ಅವನ ಮುಖದಲ್ಲಿ ಸ್ವಲ್ಪ ಮುಗ್ದತೆ ಇರಬೇಕಂತೆ. ನನಗೂ ಹೌದು ಅನಿಸುತ್ತದೆ. ಉದಾಹರಣೆಗೆ ಪ್ರತಿ ಮಗುವೂ ನೋಡಲು ಸುಂದರ ಅಲ್ಲವೆ?

ಬಾಹ್ಯ ಸೌಂದರ್ಯದ ಬಗ್ಗೆ ಹೇಳುವುದಾದರೆ, ಹಲವರು ತಾವು ಸುಂದರವಾಗಿ ಕಾಣಬೇಕು ಎಂದು ಯೋಚಿಸುತ್ತಾರೆ. ಬಾಹ್ಯ ಸೌಂದರ್ಯ ಎಷ್ಟೇ ಅಂದರೂ ಒಂದು ಅನಗತ್ಯವಾದ ಗುರುತನ್ನು(recognition) ಕೊಡುತ್ತದೆ. ಸ್ವಲ್ಪ ಸ್ವೇಚ್ಛಾ ಮನೋಭಾವದವರಾಗಿದ್ದರೆ ಕೇಳುವುದೇ ಬೇಡ. ತಮ್ಮ ಸೌಂದರ್ಯವನ್ನು ಬಳಸಿಕೊಂಡು ತಮಗೇನು ಬೇಕು ಅವನ್ನೆಲ್ಲ ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿರುತ್ತಾರೆ. ಸಮಸ್ಯೆ ಯಾರಿಗೆಂದರೆ, ಸ್ವಲ್ಪ ಮಧ್ಯಮ ವರ್ಗದ ಧರ್ಮ, ಸಂಸ್ಕಾರವನ್ನು ಪಾಲಿಸುವ ಹೆಣ್ಣುಮಕ್ಕಳಿಗೆ. ಯಾಕೆಂದರೆ ಅವರಿಗೆ ಒಬ್ಬ ಗಂಡಿನ ಜೊತೆ ಹರಟಿದರೆ ಸಾಕು ಊರೆಲ್ಲ ಸುದ್ದಿಯಾಗುತ್ತದೆ. ಊರನ್ನೇ ಎದುರು ಹಾಕಿಕೊಳ್ಳುವ ಧೈರ್ಯ ಅಪ್ಪ ಅಮ್ಮನಿಗಿರುವುದಿಲ್ಲ. ಒಬ್ಬ ಸೌಂದರ್ಯವತಿ ಮಗಳು, ಅಂಗೈಯ ಮೇಲೆ ಇಟ್ಟಿರುವ ಕೆಂಡ ಎಂದು ಅವರಿಗೆ ಗೊತ್ತಿರುತ್ತದೆ. ಅದಕ್ಕಾಗಿಯೇ ಸಾವಿರಾರು ಕಟ್ಟುಪಾಡುಗಳೂ ಇರುತ್ತವೆ. ಅದರಲ್ಲಿ ರಾತ್ರಿಯಾಗುವುದರೊಳಗಾಗಿ ಮನೆಗೆ ಬರಬೇಕು ಎಂಬುದೂ ಒಂದು. ಯಾಕೆಂದರೆ ಬಡಪಾಯಿ ತಾಯಿ, ತಂದೆ ನಡು ರಸ್ತೆಯಲ್ಲಿ ನಿಂತು ಜಗಳವಾಡಲಾರರು. ಅವರಿಗೇನಂದರೂ ಮಾನ, ಮರ್ಯಾದೆ, ಸಂಸ್ಕಾರವಷ್ಟೇ ಮುಖ್ಯ. ಇಂತಹ ಕುಲದಲ್ಲಿ ಬೆಳೆದು ನಿಂತ ನಾರಿ ಸ್ವೇಚ್ಛೆಯಿಂದ ಬೆಳೆದ ನಾರಿ ಥರ ಗಂಡಿನ ಚುಡಾಯಿಸುವಿಕೆಯನ್ನು enjoy ಮಾಡಲಾರಳು. ಅವಳಿಗೆ ಅವೇನಿದ್ದರೂ ಒಂದು ಕಿರಿ ಕಿರಿ ಮತ್ತು ಹೆದರಿಕೆ ಅಷ್ಟೆ.

ಇಲ್ಲಿ ನನಗೆ ಹಳೆಯ ಕಾಲದ ಒಂದು ಮಾತು ನೆನಪಿಗೆ ಬರುತ್ತಿದೆ. “ಭಾರ್ಯಾ ರೂಪವತೀ ಶತ್ರು:” ಅಂತ. “ನಿಮ್ಮ ಹೆಂಡತಿ ರೂಪವತಿಯಾಗಿದ್ದರೆ ಅದಕ್ಕಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ” ಅಂತ. ಹೆಂಡತಿ ರೂಪವತಿಯಾಗಿರುವ ಅಪಾಯವೇನೆಂದರೆ ಮೊದಲನೆಯದಾಗಿ, ನಿಮ್ಮ ಐಡೆಂಟಿಟಿಯೇ ನಾಶವಾಗಬಹುದು. ಎರಡನೆಯದಾಗಿ ನಿಮಗೆ ಆಕೆಯನ್ನು ಪಡೆಯುವ ತನಕ ಪಡೆಯುತ್ತೇನೋ ಇಲ್ಲವೋ ಎಂಬ ಅವ್ಯಕ್ತ ಹೆದರಿಕೆ ಮತ್ತು ಪಡೆದ ನಂತರವೂ ಕಳೆದುಕೊಳ್ಳುತ್ತೇನೇನೋ ಎನ್ನುವ ಭಯ. ಮೂರನೆಯಾದಾಗಿ, ನಿಮ್ಮ ಹೆಂಡತಿಯಿಂದಾಗಿ ಬೇರೆಯವರು ನಿಮ್ಮ ಜೀವವನ್ನೇ ತೆಗೆಯುವ ಸನ್ನಿವೇಶವೂ ಒದಗಬಹುದು. ಈ ಒಂದು ಮಾತು ಇವತ್ತಿಗೂ ಅನ್ವಯಿಸುತ್ತದೆ ಎಂದು ನನಗೆ ಅನಿಸುತ್ತದೆ.

ಆಂತರಿಕ ಸೌಂದರ್ಯದ ಬಗ್ಗೆ ಹೇಳುವುದಾದರೆ, ಅದನ್ನು ಗುರುತಿಸುವುದು ನಾನು ಮೊದಲೇ ಹೇಳಿದಂತೆ ಸ್ವಲ್ಪ ಕಷ್ಟದ ಕೆಲಸ. ಅದನ್ನು ಅರ್ಥ ಮಾಡಿಕೊಳ್ಳಲು ಸಲ್ಪ ಸಮಯ ಬೇಕು. ಬಾಹ್ಯ ಸೌಂದರ್ಯದ ತರಹ ಕ್ಷಣ ಮಾತ್ರದಲ್ಲಿ ನಿರ್ಧರಿಸುವಂಥದ್ದಲ್ಲ ಆಂತರಿಕ ಸೌಂದರ್ಯ. ಆದರೆ ಹೆಚ್ಚಾಗಿ ಇದು ಜನರ ನೋಟದಲ್ಲಿ, ಅವರ ಭಾವದಲ್ಲಿ, ಮಾತಿನಲ್ಲಿ ಮತ್ತು ಅವರು ಮಾಡುವ ಕಾರ್ಯದಲ್ಲಿ ನಮಗೆ ಗೊತ್ತಾಗುತ್ತಿರುತ್ತದೆ. ನಾನು ಯಶವಂತಪುರ - ಶಿವಾಜಿನಗರ ಬಸ್ ನಲ್ಲಿ ಒಬ್ಬ ಕಂಡಕ್ಟರನನ್ನು ನೋಡಿದ್ದೇನೆ. ಹೆಚ್ಚಿನ ಕಂಡಕ್ಟರುಗಳು ಗೋಗರೆದರೂ ಜನ ಬಾಗಿಲಿನಿಂದ ಮೇಲೆ ಬರಲೊಲ್ಲರು. ಆದರೆ ಆತ ಹೇಳುವ ರೀತಿ ಹೇಗಿರುತ್ತದೆಂದರೆ, ಎಂಥವನಿಗೂ ಬಾಗಿಲಿನಿಂದ ಮೇಲೆ ಬಂದು ಬದಿಯಲ್ಲಿ ನಿಲ್ಲುವ ಮನಸ್ಸಾಗುತ್ತದೆ. ಹೆಚ್ಚಾಗಿ ನಾನು ಗಮನಿಸುತ್ತಿರುತ್ತೇನೆ, ಬಾಹ್ಯ ಸೌಂದರ್ಯವನ್ನು ಗುರುತಿಸುವವರಿಗೆ ಒಂದು ಊರಿನಲ್ಲಿರುವ ಜನರು ಎಷ್ಟು ಒಳ್ಳೆಯವರು ಎನ್ನುವುದಕ್ಕಿಂತ ಅವರು ವಾಸಿಸುವ ಸ್ಥಳ ಶುಚಿಯಾಗಿಲ್ಲ ಎನ್ನುವುದೇ ಮುಖ್ಯವಾಗಿರುತ್ತದೆ. ಅವರನ್ನು ಕಂಡರೆ ಸಾಕು ವಾಂತಿ ಬರುವಂತಾಗುತ್ತದೆ ಎನ್ನುತ್ತಾರೆ. ಅಂಥವರು ಒಂದು ಹೆಜ್ಜೆ ಮುಂದೆ ಹೋಗಿ ಆಂತರಿಕ ಸೌಂದರ್ಯವನ್ನು ಗ್ರಹಿಸುವುದು ಕನಸಿನ ಮಾತು.

ಸೌಂದರ್ಯವೆಂದ ನಂತರ ಅದರಿಂದ ಒಳ್ಳೆಯದು, ಕೆಟ್ಟದು ಎರಡೂ ಇರುತ್ತದೆ. ಸುಂದರವಾಗಿರುವ ಹುಡುಗಿ ತನಗೆ ಬೇಕಾಗಿರುವ ಗಂಡು ಸಿಗುವ ತನಕ ಕಾಯಬಹುದು. ಒಬ್ಬ ಸಾಮಾನ್ಯ ಹುಡುಗಿಗೆ ಅಂತಹ ಒಂದು option ಇರುವುದಿಲ್ಲ. ಅದೇ ರೀತಿ ಸೌಂದರ್ಯವಿದ್ದರೆ ಕೊಂಕು ನುಡಿಯುವ ಮತ್ಸರದ ಮಂದಿಗೇನೂ ಕಡಿಮೆಯಿರುವುದಿಲ್ಲ. ಒಬ್ಬ ಸಾಮಾನ್ಯ ಹುಡುಗಿಗೆ ಇಂಥ ಅಡಚಣೆಗಳಿರುವುದಿಲ್ಲ. ಸೌಂದರ್ಯವಿರಲಿ ಇಲ್ಲದಿರಲಿ, ನನ್ನ ಪ್ರಕಾರ ಜೀವನದಲ್ಲಿ ಮುಖ್ಯವಾಗಿರುವುದು ಏನಂದರೆ ಮೂಲ ತತ್ವಗಳು (principles). ಗೆಲುವು, ಸೋಲು ಜೀವನದಲ್ಲಿ ಇರುವಂತಹುದೆ. ಮೂಲ ತತ್ವಗಳು ಇಲ್ಲವಾಗಿ ಬರೀ ಸ್ವೇಚ್ಛೆಯೇ ಮುಖ್ಯವಾದಲ್ಲಿ, ಮನುಷ್ಯ ಎಷ್ಟೇ ಸೌಂದರ್ಯವಿದ್ದರೂ ಮೇಲೇಳಲಾರ ಅಲ್ಲವೇ? ನಿಮಗೇನನಿಸುತ್ತದೆ?

Monday, July 21, 2008

ಕೊಂಕು ಸುಬ್ಬ ...

ಹುಬ್ಬಳ್ಳಿಗೆ ಮೋಡ ಬಿತ್ತನೆಯಾದರೆ, ಬೆಂಗಳೂರಿನಲ್ಲಿ ಮಳೆ ಯಾಕೆ?

ವಿಧಾನಸೌಧದಲ್ಲಿ ಕುಳಿತುಕೊಂಡು ಹುಬ್ಬಳ್ಳಿಯ ಕಡೆ ಮೋಡ ಬಿತ್ತಿದರೆ, ಬೆಂಗಳೂರಿನಲ್ಲಿಯಲ್ಲದೆ ಮತ್ತೆಲ್ಲಿ ಮಳೆ ಬೀಳಬೇಕು ಸ್ವಾಮಿ!

Friday, July 18, 2008

ಯಾರಿಗ್ಯಾರಿಹರೋ ಇಲ್ಲಿ?

“Good people do not need laws to tell them to act responsibly, while bad people will find a way around the laws.” – Plato.

ನಮ್ಮ ಜೀವನದಲ್ಲಿ ಕೆಲವು ಜನರಿರುತ್ತಾರೆ. ನೋಡಿದ್ದಕ್ಕೆ ಒಂದು ಕಾರಣ ಹಿಡಿದು ಹಿಂದೆ ಸರಿಯುತ್ತಿರುತ್ತಾರೆ. ಇನ್ನು ಕೆಲವರಿರುತ್ತಾರೆ ಅವರು ಸಮಾಜ ಕಲ್ಯಾಣಕ್ಕಾಗಿ ದುಡಿಯುವವರು. ಈ ಎರಡನೇ ಪಂಗಡದವರು ಎಂಥವರಿರುತ್ತಾರೆ ಎಂದರೆ, ಅವರಿಗೆ ನಮ್ಮ ಪರಿಚಯ ಬೇಕಾಗಿಲ್ಲ. ನಾವು ಯಾರು ಎನ್ನುವುದು ಕೂಡ ಬೇಕಾಗಿರುವುದಿಲ್ಲ. ಸಮಯಕ್ಕೆ ಸರಿಯಾಗಿ ಬಂದು ತಮ್ಮಿಂದ ಆಗಬೇಕಾದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ತಮ್ಮ ಜಾಗ ಖಾಲಿ ಮಾಡಿರುತ್ತಾರೆ. ಹಾಗೆ ಮಾಡುವುದರ ಮೂಲಕ ನಮ್ಮ ಯೋಚನಾ ಲಹರಿಯನ್ನೆ ಬದಲಿಸಿರುತ್ತಾರೆ. ಅಂಥವರನ್ನು ನೆನಪಿಸಿಕೊಳ್ಳುತ್ತಿರಬೇಕು, ಅವರು ಮಾಡಿದಂತಹ ಕೆಲಸವನ್ನು ನಾವು ಕೂಡಾ ಮಾಡುತ್ತಿರಬೇಕು. ಆಗಲೇ ನಾವು ನಮಗೆ ಸಹಾಯ ಮಾಡಿದವರಿಗೆ ಬಹುಶ: ಧನ್ಯವಾದ ಹೇಳುವುದಕ್ಕೆ ಅರ್ಹತೆಯಾದರೂ ಬರಬಹುದೇನೋ?

ನಾನು ಇತ್ತೀಚೆಗೆ ಒಂದು ರೀತಿಯ ಇಕ್ಕಟ್ಟಿಗೆ ಸಿಲುಕಿದ್ದೆ. ಅದೇನೆಂದರೆ, ವಿವಿಧ ಕಾರಣಗಳಿಂದಾಗಿ ನನ್ನ ಅಮ್ಮನಿಗೆ ಒಂದು ತಿಂಗಳ ಒಳಗಾಗಿ 8 ಬಾಟಲಿ ರಕ್ತ ಕೊಡಬೇಕಾಗಿತ್ತು. ಒಂದೆರಡು ಬಾಟಲಿಯಾದರೆ ರಕ್ತ ತೆಗೆದುಕೊಳ್ಳುವುದು ಕಷ್ಟವಲ್ಲ. ಅನಾಮತ್ತು 8 ಬಾಟಲಿ ರಕ್ತಕ್ಕೆ ನಾವೆಲ್ಲಿ ಹೋಗಬೇಕು?. ಅದಲ್ಲದೆ ಹೆಚ್ಚಿನ ಕಡೆ blood replacement ಮಾಡದೆ ಇದ್ದರೆ ರಕ್ತ ಕೊಡಲಾಗುವುದಿಲ್ಲ. ಕೆಲವು ಕಡೆ ಆ ಗ್ರೂಪ್ ನ ರಕ್ತ ಕೊಟ್ಟರೆ ಮಾತ್ರ ರಕ್ತ ಕೊಡುತ್ತಾರೆ. ನಾನು ಮಂಗಳೂರಿಗೆ ಹೋಗಿದ್ದಾಗ ಆಗಲೇ 6 ಬಾಟಲಿ ರಕ್ತ ಕೊಟ್ಟಾಗಿತ್ತು. ಒಂದು ದಿನ ಬೆಳಗ್ಗೆ ಆಸ್ಪತ್ರೆಯಿಂದ ನನಗೆ ಫೋನ್ ಬಂತು. ಆರ್ಜೆಂಟಾಗಿ ರಕ್ತ ಬೇಕು ಅಂತ. ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ blood replacement ಮಾಡಿದರೆ ಮಾತ್ರ ರಕ್ತ. ಆಗ ನಾನು ನನ್ನ ಅಣ್ಣನಿಗೆ ಫೋನಾಯಿಸಿದೆ. ಆದರೆ ನನಗೆ ಒಂದು ಬಾಟಲಿ ರಕ್ತಕ್ಕೆ ರಕ್ತ ದಾನದ ಚೀಟಿಯಿತ್ತು. ಒಂದು ಚೀಟಿಯಿದ್ದರೆ ೪೦೦ ರೂ. ಕೊಟ್ಟರೆ ಇನ್ನೊಂದು ಬಾಟಲಿ ರಕ್ತ ಕೊಡುತ್ತಾರೆ. ಆದರೆ ಆಮೇಲೆ ಬಂದು ಯಾರಾದರೂ ರಕ್ತ ಕೊಡಬೇಕು. ಆ ಬಗ್ಗೆ ಮಾತನಾಡುತ್ತಿದ್ದೆ. ಆಗ ನೋಡಿ ನಡೆಯಿತೊಂದು ಅಚ್ಚರಿಯ ಘಟನೆ. ನನ್ನ ಪಕ್ಕ ಒಬ್ಬಾತ ಬಂದು ರಕ್ತದಾನ ಮಾಡುತ್ತಿದ್ದೇನೆ ಮಾಲತಿ ಶರ್ಮಾ, ಒಮೆಗಾ ಹಾಸ್ಪಿಟಲ್ ಅಂದು ಬಿಟ್ಟ. ನನ್ನ ಅಣ್ಣ ನನಗೆ ಹೇಳಿದ್ದ ಒಬ್ಬನಿಗೆ ಹೇಳುತ್ತೇನೆ ಅವನು ಜನ ಕಳುಹಿಸಬಹುದು ಅಂತ. ಆದರೆ ಆ ಜನ ನಿಜವಾಗಿಯೂ ಬರಬಹುದು ಎಂದು ನಾನು ಊಹಿಸಿರಲಿಲ್ಲ. ನಮ್ಮ ಪರಿಚಯ ಇರುವವರೇ ನಮಗೆ ರಕ್ತ ಕೇಳಿದಾಗ ನೂರೆಂಟು ಕಾರಣ ಹೇಳಿ ತಪ್ಪಿಸಿಕೊಂಡಿದ್ದರು. ಹೀಗಿರುವಾಗ ಒಬ್ಬಾತ ಯಾರ ಪರಿಚಯವೂ ಇಲ್ಲದೆ ರಕ್ತ ಕೊಡುವುದು ಎಂದರೆ ಅಚ್ಚರಿಯಾಗದೆ ಇದ್ದೀತೆ?. ಯಾಕೋ ಅವನು ಅದರ ಅರ್ಜಿ ತುಂಬುತ್ತಿರುವಾಗ ಮಾತನಾಡಿಸಲೇಬೇಕು ಅನಿಸಿತು. ಸೀದಾ ಆತನ ಹತ್ತಿರ ಹೋಗಿ ಕೇಳಿದೆ ನಿಮ್ಮ ಹೆಸರೇನು? ಅಂತ. ಆತ ತನ್ನ ಹೆಸರು ಹೇಳಿದ. ಅದಕ್ಕೆ ಹೇಳಿದೆ, ನೀವು ರಕ್ತ ಕೊಡುತ್ತಿರುವ ಮಾಲತಿ ಶರ್ಮಾ ನನ್ನ ಅಮ್ಮ ಅಂತ. “ನಿಮ್ಮಿಂದ ದೊಡ್ಡ ಉಪಕಾರವಾಯಿತು. ನಿಮಗೆ ದೊಡ್ಡ ಧನ್ಯವಾದ” ಅಂದೆ. ನನಗೆ ಬೇಕಿದ್ದರೆ ೪೦೦ ರೂ ಕೊಟ್ಟರೆ ೨ನೇ ಬಾಟಲಿ ರಕ್ತ ಆ ಕೂಡಲೇ ಸಿಗುತ್ತಿತ್ತು. ಆದರೆ ಆ ವ್ಯಕ್ತಿ ಮೆರೆದ ಮನುಷ್ಯತ್ವ ನನ್ನ ಮನಸ್ಸಿಗೆ ತಾಕಿತ್ತು. ಮೊದಲನೆ ಬಾಟಲ್ ರಕ್ತ ಒಮೆಗಾ ಆಸ್ಪತ್ರೆಗೆ ಕೊಟ್ಟು ಎರಡನೇ ಬಾಟಲ್ ಅನ್ನು ಆತ ರಕ್ತದಾನ ಮಾಡಿದ ಮೇಲೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ. ನಾನು ಮೊದಲ ಬಾಟಲ್ ಕೊಟ್ಟು ಬರುವಷ್ಟರಲ್ಲಿ ಆತ ತನ್ನ ಕೆಲಸ ಮುಗಿಸಿ ಹೊರಟು ಹೋಗಿ ಆಗಿತ್ತು. ಆತ ನನಗೆ ಮತ್ತೆ ಸಿಗುತ್ತಾನಾ?... ಗೊತ್ತಿಲ್ಲ.

ಇನ್ನೊಂದು ಘಟನೆ ತುಂಬ ವಿಚಿತ್ರವಾದದ್ದು. ನಮ್ಮಲ್ಲೇ ಇರುವ ಸರಿಯೋ ತಪ್ಪೋ ಎಂಬ ಮನೋಭಾವನೆಗೆ ಸಂಬಂಧಪಟ್ಟಿರುವಂತಹುದು. ಆ ಘಟನೆ ನಡೆದದ್ದು ನನ್ನ ಅಮ್ಮ ಮರಣ ಹೊಂದಿದ ದಿನ. ನಮಗೆ ಆಪದ್ಬಾಂಧವ ಅಂತ ಇರುವವರು ನನ್ನ ಅಕ್ಕ(ದೊಡ್ಡಮ್ಮನ ಮಗಳು)ನ ಗಂಡ ಗಣೇಶ್ ಹೆಬ್ಬಾರ್ ಅಂತ. ಮರಣ ಹೊಂದಿದ ಕೂಡಲೇ ಎಲ್ಲ ಕಾರ್ಯಗಳನ್ನು ನಿರ್ವಹಿಸಿ ಹೆಣ ಹೊರಲು ಕೂಡ ನೆರವಾದರು. ನಮ್ಮ ಕಡೆ ಒಂದು ಅಲಿಖಿತ ನಂಬಿಕೆಯಿದೆ. ಅಪ್ಪ ಮತ್ತು ಅಮ್ಮ ಇದ್ದವರು ಹೆಣವನ್ನು ಮುಟ್ಟುವಂತಿಲ್ಲ ಎಂದು. ಆದರೆ ಇವರು ಆ ನಂಬಿಕೆಯನ್ನೇ ಬದಿಗಿಟ್ಟು ನಮಗೆ ಸಹಾಯ ಮಾಡಿದ್ದರು. ನಾನು ಮನೆಗೆ ಬಂದಾಗ ನನ್ನ ಅಕ್ಕ ನನ್ನಲ್ಲಿ ಹೇಳಿದಳು. ಈ ನನ್ನ ಭಾವ ಹೆಣ ಎತ್ತುತ್ತಿರುವಾಗ ಅವರ ಹೆಂಡತಿಯಲ್ಲಿ ಅನೇಕರು, “ನಿನ್ನ ಗಂಡನಲ್ಲಿ ಹೆಣ ಮುಟ್ಟಬೇಡ ಹೇಳು” ಎಂದು ಹೇಳುತ್ತಿದ್ದರಂತೆ. ಅದಕ್ಕೆ ಅವಳು, “ನನಗೆ ಅವರು ಮಾಡುತ್ತಿರುವ ಕೆಲಸದಲ್ಲಿ ತಪ್ಪು ಕಾಣಿಸುತ್ತಿಲ್ಲ. ಮಾಡಲಿ ಬಿಡಿ” ಅಂತ ಬಾಯಿ ಮುಚ್ಚಿಸಿದಳಂತೆ. ದಂಪತಿಗಳೆಂದರೆ ಹಾಗೆ ಇರಬೇಕು ಅಲ್ಲವೆ? ಒಬ್ಬರು ಮಾಡಿದ ಕೆಲಸವನ್ನು ಸರಿ ಇದೆ ಅನಿಸಿದಾಗ ಇನ್ನೊಬ್ಬರು ಸಮರ್ಥಿಸಬೇಕು. ಅದರ ಮರುದಿನ ಭಾವ ನನ್ನಲ್ಲಿ ಹೇಳುತ್ತಿದ್ದರು, “ಯಾರೋ ಹೆಣ ಮುಟ್ಟಬಾರದು ಹೇಳುತ್ತಿದ್ದರಂತೆ. ನಾನು ಪಿಯುಸಿ ಮಾಡುತ್ತಿರುವಾಗ ಒಬ್ಬರನ್ನು ತೊಡೆಯಲ್ಲಿ ಕೂರಿಸಿಕೊಂಡು ಬೆಂಗಳೂರಿನಿಂದ ಶಿವಮೊಗ್ಗ ತನಕ ಬಂದಿದ್ದೆ” ಅಂತ. ಹೌದು! ಯಾವುದೇ ಕೆಲಸ ಮಾಡುವುದಕ್ಕೂ ಯಾರು ಏನು ಹೇಳುತ್ತಾರೆ ಎಂದು ಲೆಕ್ಕಿಸದೆ ಕೆಲಸ ಮಾಡಬೇಕೆಂದರೆ, ಅದಕ್ಕೆ ಧೈರ್ಯ ಮುಖ್ಯ. ಕಾರ್ಯಕ್ರಮವೆಲ್ಲ ಮುಗಿದ ನಂತರ ಉಳಿದ ಹಿರಿಯರಿಗೆ ನಮಸ್ಕರಿಸುತ್ತಿರುವಾಗ ಈ ನನ್ನ ಅಕ್ಕ, ಭಾವನವರನ್ನು ಕೂಡ ಕರೆದು ನಮಸ್ಕಾರ ಮಾಡಿದೆ. ಆಗ ಆ ಮಹಾತಾಯಿಯ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ತಮ್ಮ ಕೆಲಸವನ್ನು ಗುರುತಿಸಿದರಲ್ಲ ಎನ್ನುವ ಸಮಾಧಾನ ಅದರಲ್ಲಿ ಇತ್ತೇನೋ?... ಗೊತ್ತಿಲ್ಲ.

ಹೀಗೆ ಕೆಲವರು ತಮ್ಮ ಪುಟ್ಟ ಕೆಲಸಗಳಿಂದ ನಮ್ಮಲ್ಲಿ ಅಳಿಸಲಾಗದ ಹೆಜ್ಜೆಗಳನ್ನು ಬಿಟ್ಟು ಹೋಗಿರುತ್ತಾರೆ. ನನಗೆ ಈ ಮೇಲಿನ ಘಟನೆಗಳು ಮನಸ್ಸಿಗೆ ತಾಕಿದ್ದು ಯಾಕೆಂದರೆ, ಇವೆರಡೂ ಘಟನೆಗಳು ಹಣವನ್ನು ಮೀರಿದಂಥವು. ನಾವು ಹೇಳುತ್ತಿರುತ್ತೇವೆ, ನಾನು ನನ್ನಿಂದಾದಷ್ಟು ಮಾಡಿದೆ ಎಂದು. ಅದರ ಬದಲು ನಾವು ಏನು ಅಗತ್ಯವಿದೆ ಎನ್ನುವುದನ್ನು ಅರಿತು ಕೆಲಸ ಮಾಡುವುದು ಜಾಣತನ. ಇಲ್ಲೊಂದು ವಿನ್ ಸ್ಟಲ್ ಚರ್ಚಿಲ್ ಅವರ ಮಾತಿದೆ. "It is no use saying, 'We are doing our best.' You have got to succeed in doing what is necessary" ಅಂತ. ನಾವು ಹಲವು ಸಲ ನಮ್ಮದೇ ಆದ ಚೌಕಟ್ಟಿನೊಳಗೆ ಯೋಚಿಸುತ್ತಿರುತ್ತೇವೆ. ಅದರಾಚೆ ನಮ್ಮ ಯೋಚನೆಗಳು ಸಾಗುವುದೇ ಇಲ್ಲ. “ಚಾಪೆ ಇದ್ದಷ್ಟೆ ಕಾಲು ಚಾಚು” ಎನ್ನುವುದು ಲೋಕರೂಢಿಯ ಮಾತು. ಆದರೆ ಕೆಲವರು ತನ್ನಿಂದ ಒಂದು ಸಹಾಯ ಆಗುವುದಾದರೆ ಚಾಪೆಯ ಹೊರಗೆ ಕಾಲು ಚಾಚಿದರೆ ಏನಾಗುತ್ತದೆ ನೋಡೋಣ ಎಂದು ಯೋಚಿಸುತ್ತಾರೆ. ಹಾಗಾಗಿಯೇ ಅಂಥವರು ಮನಸ್ಸಿಗೆ ಹತ್ತಿರವಾಗುತ್ತಾರೆ. ಹಲವು ಸಲ ನಾನು ಕೂಡ ಇಂತಹ ಹಣದಿಂದ ಕೊಳ್ಳಲಾರದಂತಹ ಕೆಲಸ ಮಾಡಬೇಕು ಅಂದುಕೊಳ್ಳುತ್ತೇನೆ. ಯಾವಾಗ ಮಾಡುತ್ತೇನೆ? ಎನ್ನುವುದು ಗೊತ್ತಿಲ್ಲ. ಆದರೆ ನನ್ನ ಅಂತಹ ಒಂದು ಪ್ರಯತ್ನ ಯಾವಾಗಲೂ ಜಾರಿಯಲ್ಲಿರುತ್ತದೆ.

Wednesday, July 16, 2008

ಜಿಂಕೆ ಮರೀನಾ?...

ಒಂದು ದಿನ ನಾನು ಸುಮಾರು 8 ಗಂಟೆ ರಾತ್ರಿಗೆ ನನ್ನ ಆಫೀಸಿನಲ್ಲಿ ಕೆಲಸ ಮಾಡುತ್ತಾ ಕುಳಿತಿದ್ದೆ. ನನ್ನ ಅಕ್ಕ ಪಕ್ಕ ಕೆಲವು ಕನ್ನಡಿಗರಿದ್ದರೂ ಕನ್ನಡಿಗರಲ್ಲದವರ ಸಂಖ್ಯೆ ಅಲ್ಲಿ ಜಾಸ್ತಿ ಇತ್ತು. ಆಗ ನೋಡಿ ಬಂತು ಒಂದು ಕಂಪ್ಯೂಟರಿನಿಂದ ಈ ಹಾಡು. ಅಲ್ಲಿ ಇದ್ದದ್ದೇ ಕಡಿಮೆ ಜನ. ಅಲ್ಲಿದ್ದ ಎಲ್ಲರೂ ಹಾಡಿಗೆ ಹೆಜ್ಜೆ ಹಾಕಲು ಶುರು ಮಾಡಿದರು. ಅಷ್ಟೇ ಅಲ್ಲದೆ, ಅಲ್ಲಿಯೇ ನಿಂತುಕೊಂಡು ನೋಡುತ್ತಿದ್ದ ಕನ್ನಡ ಹುಡುಗಿಗೆ ಕೇಳಿದರು, ನಿನಗೆ ಡ್ಯಾನ್ಸ್ ಮಾಡಬೇಕು ಅನ್ನಿಸುವುದಿಲ್ವಾ? ಈ ಹಾಡು ಕೇಳಿದಾಗ ಅಂತ. ಹೌದು! ಈಗ ಎಲ್ಲ ಕಡೆ ಜಿಂಕೆ ಮರಿದ್ದೇ ಸದ್ದು. ಒಂದು ರೀತಿಯಲ್ಲಿ ಜಿಂಕೆ ಮರೀನಾ ಹಾಡು ಬರೀ ಕನ್ನಡಿಗರನ್ನು ಮಾತ್ರವಲ್ಲ; ಕನ್ನಡದಲ್ಲಿ ಆಸಕ್ತಿ ಇರುವವರನ್ನು ಸಹ ಕನ್ನಡಕ್ಕೆ ಇನ್ನಷ್ಟು ಹತ್ತಿರ ತಂದಿದೆ.

ಇಷ್ಟೇ ಆಗಿದ್ದರೆ ನಾನು ಸುಮ್ಮನೆ ಈ ಲೇಖನ ಬರೆಯುತ್ತಿರಲಿಲ್ಲ. ಅದೊಂದು ಕಾಲವಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರಲ್ಲದವರನ್ನು ಬಿಡಿ, ನಮ್ಮ ಕನ್ನಡಿಗರೆ ಕನ್ನಡ ಮಾತನಾಡುವುದು ಯಾರ ಕಿವಿಗೂ ಬೀಳುತ್ತಿರಲಿಲ್ಲ. ಅದೊಂದು ಯಾವ ರೀತಿಯ ಕೀಳರಿಮೆಯೋ ನನಗೆ ಗೊತ್ತಿಲ್ಲ. ಆಗ ಇದ್ದ ರೇಡಿಯೋ ಸಿಟಿ ಕೂಡ ಎಂಥಹ ದರ್ಪ ತೋರುತ್ತಿತ್ತು ಎಂದರೆ ಕನ್ನಡ ಹಾಡು ಹಾಕುವುದ ಬದಿಯಲ್ಲಿರಲಿ, ಕೆಲವು ಶೋಗಳಲ್ಲಿ ಕನ್ನಡ ಮಾತನಾಡಿದರೆ ಸಾಕು ಸಂಪರ್ಕ ತಪ್ಪಿ ಹೋಗುತ್ತಿತ್ತು. ಆಗ ಹುಟ್ಟಿಕೊಂಡಿದ್ದೆ ಸಣ್ಣ ಸಣ್ಣ ಕನ್ನಡ ಸಂಘಟನೆಗಳು. ಹೀಗೆ ಕೆಲವರು ತಮ್ಮ ತಮ್ಮ ಕಂಪೆನಿಗಳಲ್ಲಿ ಕನ್ನಡ ಮಾತನಾಡಲು ಶುರುವಿಟ್ಟರು. ರೇಡಿಯೋ ಮಿರ್ಚಿಯಲ್ಲಿ ಮೊದಲ ಸಲ 24 ಗಂಟೆ ಕನ್ನಡ ಎಂಬ ಸುದ್ದಿ ಹೊರಬಿದ್ದಾಗ ಎಲ್ಲ ಕನ್ನಡ ಅಭಿಮಾನಿಗಳಲ್ಲಿ ರೇಡಿಯೋ ಮಿರ್ಚಿಯನ್ನು ಗೆಲ್ಲಿಸುವುದಕ್ಕಿಂತ ಕನ್ನಡಕ್ಕೆ ಅವಮಾನ ಎಸಗಿದ ರೇಡಿಯೋ ಸಿಟಿಯನ್ನು ಸೋಲಿಸಬೇಕೆಂಬ ಜಿದ್ದು ಹುಟ್ಟಿತ್ತು. ಆ ಕಾಲದಲ್ಲಿ ರೇಡಿಯೋ ಮಿರ್ಚಿಯನ್ನು ಬೆಂಬಲಿಸಿ ಎನ್ನುವ ಇ-ಮೇಲ್ ಗಳು ಹರಿದಾಡಿದ್ದವು. ಇಂದು ರೇಡಿಯೋದಲ್ಲಿ ಎಲ್ಲಿ ನೋಡಿದರಲ್ಲಿ ಕನ್ನಡಮಯ. ಅದರ ಅರ್ಥ ಇಷ್ಟೆ. ಒಳ್ಳೆಯ ಸಂಗೀತವಿದ್ದರೆ ಕೇಳುವವರು ಯಾವತ್ತೂ ಇರುತ್ತಾರೆ. ಮಾತ್ರವಲ್ಲ ಒಳ್ಳೆಯ ಸಂಗೀತವನ್ನು ಬೆಂಬಲಿಸುತ್ತಾರೆ ಕೂಡ.

ಈ ಥರದ ಹಾಡುಗಳು ಯಾವ ಸಮಯದಲ್ಲೂ ಕುಳಿತು ಗುನುಗುವ ಹಾಡುಗಳಲ್ಲ. ಕೆಲವು ಸಮಯದಲ್ಲಿ ಕುಳಿತು ಕೇಳುವಂಥವು. ಆದ್ದರಿಂದ ಆಗಾಗ ಆಯಾಯ ಕಾಲಕ್ಕೆ ತಕ್ಕಂತೆ ಇಂಥಹ ಹಾಡುಗಳು ಬಂದರೆ, ಮನಸ್ಸಿಗೂ ಒಂದು ಖುಷಿಯನ್ನು ಕೊಡುತ್ತದೆ ಮಾತ್ರವಲ್ಲ, ಸರ್ವ ಭಾಷಿಕರನ್ನು ಕೂಡ ಕನ್ನಡದತ್ತ ಸೆಳೆಯುತ್ತದೆ
.

Thursday, July 10, 2008

ಹೀಗಿದೆ ನಮ್ಮೂರು,


ಇದು ನಾನು ಬಸ್ಸಿನಿಂದ ಇಳಿಯುವ ಅಲ್ಲಿಪಾದೆ ಬಸ್ ನಿಲ್ದಾಣ। ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದೆ। :)