Tuesday, January 6, 2009

ಸಂಸ್ಥೆ ಸಮರ್ಥನಂ ಅಂತ !!!

ಯಾವಾಗಲೂ ನಮಗೆ ಜನ ಯಾರಾದರೂ ನಮ್ಮನ್ನು ನೋಡುವಂತಹ ಕೆಲಸ ಮಾಡಬೇಕು. ನಮಗೆ ಮೂಡ್ ಕೆಟ್ಟಾಗ ಹೊಸ ಹೊಸ ಜಾಗಗಳನ್ನು ನೋಡಬೇಕು, ಹೇಯ್ ಆ ಹುಡುಗಿ ಚೆನ್ನಾಗಿದ್ದಾಳೆ ನೋಡು ಹೀಗೆ ದ್ರಷ್ಟಿಗೆ ಸಂಬಂಧಪಟ್ಟ ಅನೇಕ ವಿಷಯಗಳು ನಮ್ಮ ಮನದಲ್ಲಿರುತ್ತವೆ. ಇತ್ತೀಚೆಗೆ ಮಾಂಡೂಕ್ಯೋಪನಿಷತ್ ಓದುತ್ತಿರುವಾಗ ಅಲ್ಲಿ ಒಂದು ವಿಷಯವನ್ನು ಓದಿದೆ. ನಮ್ಮ ಎಚ್ಚರದ ಸ್ಥಿತಿಯಲ್ಲಿ ನಾವು ನಮ್ಮ ಬಲಗಣ್ಣಿನಿಂದ ನೋಡುತ್ತೇವೆ ಎಂದು(ಮಾಂಡೂಕ್ಯೋಪನಿಷತ್ ಮನುಷ್ಯನ ಎಚ್ಚರ, ಸ್ವಪ್ನ ಮತ್ತು ಗಾಢ ನಿದ್ರೆ ಎಂಬ ೩ ವಿಭಾಗಗಳ ಬಗ್ಗೆ ಹೇಳುತ್ತದೆ). ಅದೊಂದು ತತ್ವಜ್ಞಾನದ ಮಾತಾಯಿತು. ಆದರೆ ಕೆಲವರಿಗೆ ಕಣ್ಣೇ ಇರುವುದಿಲ್ಲವಲ್ಲ? ಅವರ ಗತಿ ಏನು? ಅವರ ಜೀವನ ಶೈಲಿ ಹೇಗೆ? ಎಂದು ನೋಡಲು ಹೊರಟರೆ ಬೆರಗಾಗುತ್ತದೆ. ಒಬ್ಬ ಕುರುಡನ ಬದುಕು ಬೇಡವೆನಿಸುತ್ತದೆ. ನನ್ನ ಅಮ್ಮ ಕೊನೆಗಾಲದಲ್ಲಿ ನನಗೊಂದು ಅತ್ಯಂತ Shock ಆಗುವಂಥ ವಿಷಯ ಹೇಳಿದ್ದರು. ಅದೆಂದರೆ, “ರವಿ ನನ್ನ ಕಣ್ಣು ಕಾಣಿಸುತ್ತಿಲ್ಲ. ನಾನು ಬದುಕುಳಿದರೆ ನನ್ನ ಕಣ್ಣು ಆಪರೇಶನ್ ಮಾಡಿಸುತ್ತೀಯಲ್ವಾ?” ಅಂತ. ಆ ಸಮಯದಲ್ಲಿ ಭಾವುಕನಾಗಿ “ಹೌದು” ಅಂದಿದ್ದೆ.

ಅದೊಂದು ಭಾನುವಾರ, ಆಗ ನನಗೆ ವಿಪರೀತ ಕೆಲಸ. ಹಾಗಾಗಿ ಆಫೀಸಿಗೆ ಬಂದು ದೀಪಾಂಜಲಿ ನಗರದಲ್ಲಿ ಇಳಿದಿದ್ದೆ. ಒಂದು ಐದು ನಿಮಿಷಗಳ ನಂತರ ಒಬ್ಬಾತ ಬಂದು “ಸರ್, ಮೆಜೆಸ್ಟಿಕ್ ಬಸ್ ಬಂದರೆ ಹೇಳಿ” ಅಂದ ಹಾಗಾಯಿತು. ತಿರುಗಿ ನೋಡಿದೆ, ಒಬ್ಬ ಕುರುಡ ನಿಂತಿದ್ದ. ಸರಿ, ನಾನು ಕೂಡ ಮೆಜೆಸ್ಟಿಕ್ ಗೆ ಬರುವವನಿದ್ದೆ. ಅದಕ್ಕೆ ಹತ್ತಿಸಿದರಾಯಿತು ಎಂದು “ಇನ್ನೇನು ಬರತ್ತೆ, ಬಂದಾಗ ಹೇಳುತ್ತೇನೆ” ಎಂದು ಸುಮ್ಮನಾದೆ. ಬಸ್ ಬೇಗ ಬರಲಿಲ್ಲ. ಆತ ಇದ್ದವನು “ಸರ್, your good name?” ಅಂದ. ಯಾರೋ ಮುನ್ನಾ ಭಾಯಿ ಇರಬೇಕು ಅಂತ ಮನಸ್ಸಿಗೆ ಖುಷಿಯಾಗಿ ನನ್ನ ಹೆಸರು ಹೇಳಿ, ನಿಮ್ಮ ಹೆಸರೇನು? ಏನು ಮಾಡುತ್ತಿದ್ದೀರಿ ? ಎಂದು ಕೇಳಿದವನಿಗೆ ಅಚ್ಚರಿ ಕಾದಿತ್ತು. “ಸರ್, ನಾನು ಮಹೇಶ್, ಊರು ನಂಜನಗೂಡು. ಅಂತರ ರಾಷ್ಟ್ರೀಯ ಕ್ರಿಕೆಟರ್, ರಾಷ್ಟ್ರೀಯ ಚೆಸ್ ಚಾಂಪಿಯನ್. ಇಲ್ಲಿ ಜೆ.ಪಿ. ನಗರದ ಹತ್ತಿರ ಇದ್ದೇನೆ” ಎಂದು ಹೇಳಿದ. ಆಗ ನನಗೆ ಅನಿಸಿದ್ದು ಇಷ್ಟೆ! ನಾವು ಧೋನಿ, ತೆಂಡುಲ್ಕರ್ ಎಂದು ಅವರ ಹಿಂದೆ ಬೀಳುತ್ತೇವೆ. ನಮ್ಮ ರಾಜ್ಯದವನೆ ಆದಂತಹ ಒಬ್ಬ ಕುರುಡ international cricketer ಬಗ್ಗೆ ನಮಗೆ ವಿಷಯವೇ ಗೊತ್ತಿಲ್ಲ! ಆಟ ಒಂದೆ, ಆದರೆ ಅದನ್ನು ಆಡುವವರಿಗೆ ಸಿಗುವ ಸ್ಥಾನಮಾನವೇ ಬೇರೆ. ನನ್ನ ಯೋಚನೆಗಳಿಗೆ ತಡೆಯೊಡ್ಡುವಂತೆ ಅವನಿಂದ ಪ್ರಶ್ನೆ ಬಂತು. “ಸರ್, ನೀವು ಮಂಗಳೂರಿನವರಾ?” ಅಂತ. ಇಂದು ಬೆಂಗಳೂರಿಗೆ ಬಂದು, ಆ ಕಡೆ ಮಂಗಳೂರೂ ಅಲ್ಲ ಈ ಕಡೆ ಬೆಂಗಳೂರೂ ಅಲ್ಲ ಎಂಬಂತೆ ಇರುವವನ ಮೂಲವನ್ನು ಸರಿಯಾಗಿ ಹೇಳಿದ ವ್ಯಕ್ತಿಯ ಬಗ್ಗೆ ನನಗೆ ಕೂಡಲೆ ಮೆಚ್ಚುಗೆ ಮೂಡಿತು. ಒಬ್ಬ ಅಂತರ್ ರಾಷ್ಟ್ರೀಯ ಆಟಗಾರನನ್ನು ಮಾತನಾಡಿಸುವ ಹುಮ್ಮಸ್ಸು ಮೂಡಿತು.

ನನಗೆ ಅಂತರ ರಾಷ್ಟ್ರೀಯ ಆಟಗಾರರನ್ನು ಕ್ರಿಕೆಟ್ ನಲ್ಲಿ ಹೇಗೆ ಆಯ್ಕೆ ಮಾಡುತ್ತಾರೆ? ಎನ್ನುವ ಬಗ್ಗೆ ಒಂದು ಕೆಟ್ಟ ಕುತೂಹಲವಿತ್ತು. ಅದನ್ನು ಆತನಲ್ಲಿ ಕೇಳಿದೆ. ಆತನೆ ಹೇಳಿದ ಪ್ರಕಾರ, ಒಂದು ತಂಡವನ್ನು ರಚಿಸುವಾಗ 40 ಜನ ಆಟಗಾರರನ್ನು ತೆಗೆದುಕೊಂಡು 15 ದಿನಗಳ ಟ್ರೈನಿಂಗ್ ನಲ್ಲಿ 20 ಜನರ ಒಂದು ತಂಡವನ್ನು ಸಿದ್ದಪಡಿಸುತ್ತಾರಂತೆ. ಆಮೇಲೆ ನಡೆಯುವುದು ಹಿಂದೆ ಯಾರು ಆಡಿದ್ದರು? ಯಾರನ್ನು ತೆಗೆದುಕೊಳ್ಳಬೇಕು ಎಂಬ ಆಟ ಮೇಲಾಟಗಳು. ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಕುರುಡರ ವಿಶ್ವಕಪ್ ನಡೆಯಲಿದೆಯಂತೆ. ಅದಕ್ಕೊಂದು “ಬೆಸ್ಟ್ ಆಫ್ ಲಕ್” ಹೇಳಿದೆ.

ಅಲ್ಲಿಂದ ನನ್ನ ಗಮನ ಚೆಸ್ ಆಟದತ್ತ ಹೊರಳಿತು. ನಿಮಗೆ ನೋಡಲು ಆಗುವುದಿಲ್ಲ ಚೆಸ್ ಆಟ ಆಡುವುದು ಕಷ್ಟ ಅಲ್ಲವೆ? ಎಂದು ನನ್ನ ಕುತೂಹಲದ ಇನ್ನೊಂದು ಬತ್ತಳಿಕೆಯನ್ನು ಬಿಟ್ಟೆ. ಅದಕ್ಕವನಿತ್ತ ಉತ್ತರ, ಬಿಳಿ ಕಾಯಿಗಳ ತಲೆಯ ಮೇಲೆ ಸಣ್ಣದೊಂದು dot ಇರುತ್ತದೆಯಂತೆ.ಕಾಯಿಗಳನ್ನು ಹೇಗೆ ಗುರುತಿಸುತ್ತೀರಿ? ಎಂದರೆ, ಆತ ತನ್ನ ಕೈ ಬೆರಳುಗಳನ್ನು ಅಗಲಿಸಿ ಹೇಳಿದ. “ಸರ್, ನೋಡಿ, ಇವು ಕೈ ಬೆರಳುಗಳು. ಆದರೆ ಎತ್ತರದಲ್ಲಿ ಬೇರೆ ಬೇರೆ ಬೆರಳುಗಳನ್ನು ಗುರುತಿಸಬಹುದಲ್ವ? ಅದೇ ರೀತಿ ಚೆಸ್ ಆಡುವಾಗ ಕಾಯಿಗಳನ್ನು ನೆನಪಿನಲ್ಲಿಡುತ್ತೇವೆ” ಎಂದ.ಆದರೂ ಆತನಿಗೆ ನೆನಪಿನ ಶಕ್ತಿ ಚೆನ್ನಾಗಿರಬೇಕು ಎಂದು ನನಗನಿಸಿತು.

ಈ ಕುರುಡರ ಬಗ್ಗೆ ನಾನು ಗಮನಿಸಿರುವ ಅಂಶ ಎಂದರೆ, ಅವರ ಹ್ರದಯ ವೈಶಾಲ್ಯತೆ. ನಿಮಗೆ ಇಷ್ಟವಾಗುವ ಹಾಗೆ ಮಾತನಾಡುತ್ತಾರೆ. ಒಂದು ಪುಟ್ಟ ಮಗು ಸಿಕ್ಕರೆ ಹೊರಗೆ ಮರ ನೋಡು ಎಂದು ತಮಗೆ ನೋಡುವ ಶಕ್ತಿಯಿಲ್ಲದಿದ್ದರೂ ಪರರ ಸಂತೋಷದಲ್ಲಿ ಸಂತ್ರಪ್ತಿಯನ್ನು ಕಾಣುತ್ತಾರೆ. ಒಂದು ದಿನ ಬೆಂಗಳೂರಿನ ಬಸ್ ನಲ್ಲಿ ಕುರುಡನಾಗಿದ್ದ ಅಪ್ಪ ತನ್ನ ಮಗನಲ್ಲಿ ಬೆಂಗಳೂರಿನ ಮರ, ಅಂಗಡಿ, ಟ್ರಾಫಿಕ್ ಎಂಜಾಯ್ ಮಾಡ್ತಾ ಇದ್ದೀಯ? ಎಂದು ಪ್ರಶ್ನಿಸುವುದನ್ನು ನೋಡಿದ್ದೆ. ಈತ ಕೂಡ ಬಸ್ ನಲ್ಲಿ ಸೀಟು ಸಿಕ್ಕಿದ ಕೂಡಲೆ ಪಕ್ಕ ಇದ್ದ ಮಗುವೊಂದನ್ನು ಎದೆಗವಚಿಕೊಂಡು ಮಾತನಾಡಿಸುತ್ತಿದ್ದ. ನನ್ನ ಪಕ್ಕದವನಲ್ಲಿ ಹೇಳಿದೆ. ಅವನು international cricketer ಅಂತ. ಆತ ಇದ್ದವನು “ನೋಡ್ರಿ ದೇವರು ಎಂಥವರಿಗೆ ಎಂಥ ಶಿಕ್ಷೆ ಕೊಟ್ಟಿರುತ್ತಾನೆ?” ಅಂತ. ನನಗೆ ಅಂಥ ಮಾತುಗಳು ಇಷ್ಟವಾಗುವುದಿಲ್ಲ. ನಮ್ಮ ಎದುರು ಇರುವವರು ಹೇಗಿದ್ದಾರೆ? ಅದನ್ನು ಒಪ್ಪಿಕೊಳ್ಳಲು ನಾವು ಕಲಿಯಬೇಕು. ಅದು ಬಿಟ್ಟು ದೇವರ ಮೇಲೆ ಸಲ್ಲದ ಆರೋಪ ಹೊರಿಸಲು ಹೋಗಬಾರದು.

ಮನುಷ್ಯರಲ್ಲಿರುವ ವ್ಯತ್ಯಾಸಗಳಿಷ್ಟೆ, ಕೆಲವರು ಕುರುಡರಾದರೆ ಬೀದಿ ಬದಿಯ ಭಿಕ್ಷುಕರಾಗುತ್ತಾರೆ. ಇನ್ನು ಕೆಲವರು ತಮಗಿರುವ ಅಡೆ ತಡೆಗಳನ್ನು ಮೀರಿ ಸಂಗೀತಗಾರರು, ನಾಟ್ಯಗಾರರು, ಆಟಗಾರರು, ಅಂಗಡಿ ಇಟ್ಟವರಾಗಿ ಬೆಳೆದು ನಮ್ಮಂತವರಿಗೆ ಆದರ್ಶವಾಗಿ ನಿಲ್ಲುತ್ತಾರೆ. ನಾವು ಕೂಡ ಅಷ್ಟೆ ಎಷ್ಟೋ ಸಲ ನಾವೆಷ್ಟು ಅದ್ರಷ್ಟಶಾಲಿಗಳು ಎಂಬುದನ್ನು ಮರೆತು ಜಡತ್ವದಿಂದಲೇ ನಮ್ಮ ಸಮಯವನ್ನು ವ್ಯರ್ಥ ಮಾಡಿ ಬಿಟ್ಟಿರುತ್ತೇವೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನಮಗೆ ಬಾಹ್ಯ ಪ್ರಪಂಚವನ್ನು ತೋರಿಸುವ ದೇಹದೊಳಿರುವ ಕಣ್ಣು ತೆರೆದಿದ್ದರೆ ಇಂತಹ ವ್ಯಕ್ತಿಗಳ ಒಳ ಕಣ್ಣು, ಅಂದರೆ, ಅಂತ:ಕರಣ ತೆರೆದಿರುತ್ತದೆ. ಕೊನೆಗೆ ಅವನಲ್ಲಿ ಕೇಳಿದೆ, “ಯಾವ ಸಂಸ್ಥೆಯಲ್ಲಿದ್ದೀರಿ?” ಅಂತ. ಆತನಿಂದ ಬಂದ ಉತ್ತರ “ಸಮರ್ಥನಂ” ಅಂತ.