Showing posts with label values. care. Show all posts
Showing posts with label values. care. Show all posts

Friday, July 18, 2008

ಯಾರಿಗ್ಯಾರಿಹರೋ ಇಲ್ಲಿ?

“Good people do not need laws to tell them to act responsibly, while bad people will find a way around the laws.” – Plato.

ನಮ್ಮ ಜೀವನದಲ್ಲಿ ಕೆಲವು ಜನರಿರುತ್ತಾರೆ. ನೋಡಿದ್ದಕ್ಕೆ ಒಂದು ಕಾರಣ ಹಿಡಿದು ಹಿಂದೆ ಸರಿಯುತ್ತಿರುತ್ತಾರೆ. ಇನ್ನು ಕೆಲವರಿರುತ್ತಾರೆ ಅವರು ಸಮಾಜ ಕಲ್ಯಾಣಕ್ಕಾಗಿ ದುಡಿಯುವವರು. ಈ ಎರಡನೇ ಪಂಗಡದವರು ಎಂಥವರಿರುತ್ತಾರೆ ಎಂದರೆ, ಅವರಿಗೆ ನಮ್ಮ ಪರಿಚಯ ಬೇಕಾಗಿಲ್ಲ. ನಾವು ಯಾರು ಎನ್ನುವುದು ಕೂಡ ಬೇಕಾಗಿರುವುದಿಲ್ಲ. ಸಮಯಕ್ಕೆ ಸರಿಯಾಗಿ ಬಂದು ತಮ್ಮಿಂದ ಆಗಬೇಕಾದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ತಮ್ಮ ಜಾಗ ಖಾಲಿ ಮಾಡಿರುತ್ತಾರೆ. ಹಾಗೆ ಮಾಡುವುದರ ಮೂಲಕ ನಮ್ಮ ಯೋಚನಾ ಲಹರಿಯನ್ನೆ ಬದಲಿಸಿರುತ್ತಾರೆ. ಅಂಥವರನ್ನು ನೆನಪಿಸಿಕೊಳ್ಳುತ್ತಿರಬೇಕು, ಅವರು ಮಾಡಿದಂತಹ ಕೆಲಸವನ್ನು ನಾವು ಕೂಡಾ ಮಾಡುತ್ತಿರಬೇಕು. ಆಗಲೇ ನಾವು ನಮಗೆ ಸಹಾಯ ಮಾಡಿದವರಿಗೆ ಬಹುಶ: ಧನ್ಯವಾದ ಹೇಳುವುದಕ್ಕೆ ಅರ್ಹತೆಯಾದರೂ ಬರಬಹುದೇನೋ?

ನಾನು ಇತ್ತೀಚೆಗೆ ಒಂದು ರೀತಿಯ ಇಕ್ಕಟ್ಟಿಗೆ ಸಿಲುಕಿದ್ದೆ. ಅದೇನೆಂದರೆ, ವಿವಿಧ ಕಾರಣಗಳಿಂದಾಗಿ ನನ್ನ ಅಮ್ಮನಿಗೆ ಒಂದು ತಿಂಗಳ ಒಳಗಾಗಿ 8 ಬಾಟಲಿ ರಕ್ತ ಕೊಡಬೇಕಾಗಿತ್ತು. ಒಂದೆರಡು ಬಾಟಲಿಯಾದರೆ ರಕ್ತ ತೆಗೆದುಕೊಳ್ಳುವುದು ಕಷ್ಟವಲ್ಲ. ಅನಾಮತ್ತು 8 ಬಾಟಲಿ ರಕ್ತಕ್ಕೆ ನಾವೆಲ್ಲಿ ಹೋಗಬೇಕು?. ಅದಲ್ಲದೆ ಹೆಚ್ಚಿನ ಕಡೆ blood replacement ಮಾಡದೆ ಇದ್ದರೆ ರಕ್ತ ಕೊಡಲಾಗುವುದಿಲ್ಲ. ಕೆಲವು ಕಡೆ ಆ ಗ್ರೂಪ್ ನ ರಕ್ತ ಕೊಟ್ಟರೆ ಮಾತ್ರ ರಕ್ತ ಕೊಡುತ್ತಾರೆ. ನಾನು ಮಂಗಳೂರಿಗೆ ಹೋಗಿದ್ದಾಗ ಆಗಲೇ 6 ಬಾಟಲಿ ರಕ್ತ ಕೊಟ್ಟಾಗಿತ್ತು. ಒಂದು ದಿನ ಬೆಳಗ್ಗೆ ಆಸ್ಪತ್ರೆಯಿಂದ ನನಗೆ ಫೋನ್ ಬಂತು. ಆರ್ಜೆಂಟಾಗಿ ರಕ್ತ ಬೇಕು ಅಂತ. ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ blood replacement ಮಾಡಿದರೆ ಮಾತ್ರ ರಕ್ತ. ಆಗ ನಾನು ನನ್ನ ಅಣ್ಣನಿಗೆ ಫೋನಾಯಿಸಿದೆ. ಆದರೆ ನನಗೆ ಒಂದು ಬಾಟಲಿ ರಕ್ತಕ್ಕೆ ರಕ್ತ ದಾನದ ಚೀಟಿಯಿತ್ತು. ಒಂದು ಚೀಟಿಯಿದ್ದರೆ ೪೦೦ ರೂ. ಕೊಟ್ಟರೆ ಇನ್ನೊಂದು ಬಾಟಲಿ ರಕ್ತ ಕೊಡುತ್ತಾರೆ. ಆದರೆ ಆಮೇಲೆ ಬಂದು ಯಾರಾದರೂ ರಕ್ತ ಕೊಡಬೇಕು. ಆ ಬಗ್ಗೆ ಮಾತನಾಡುತ್ತಿದ್ದೆ. ಆಗ ನೋಡಿ ನಡೆಯಿತೊಂದು ಅಚ್ಚರಿಯ ಘಟನೆ. ನನ್ನ ಪಕ್ಕ ಒಬ್ಬಾತ ಬಂದು ರಕ್ತದಾನ ಮಾಡುತ್ತಿದ್ದೇನೆ ಮಾಲತಿ ಶರ್ಮಾ, ಒಮೆಗಾ ಹಾಸ್ಪಿಟಲ್ ಅಂದು ಬಿಟ್ಟ. ನನ್ನ ಅಣ್ಣ ನನಗೆ ಹೇಳಿದ್ದ ಒಬ್ಬನಿಗೆ ಹೇಳುತ್ತೇನೆ ಅವನು ಜನ ಕಳುಹಿಸಬಹುದು ಅಂತ. ಆದರೆ ಆ ಜನ ನಿಜವಾಗಿಯೂ ಬರಬಹುದು ಎಂದು ನಾನು ಊಹಿಸಿರಲಿಲ್ಲ. ನಮ್ಮ ಪರಿಚಯ ಇರುವವರೇ ನಮಗೆ ರಕ್ತ ಕೇಳಿದಾಗ ನೂರೆಂಟು ಕಾರಣ ಹೇಳಿ ತಪ್ಪಿಸಿಕೊಂಡಿದ್ದರು. ಹೀಗಿರುವಾಗ ಒಬ್ಬಾತ ಯಾರ ಪರಿಚಯವೂ ಇಲ್ಲದೆ ರಕ್ತ ಕೊಡುವುದು ಎಂದರೆ ಅಚ್ಚರಿಯಾಗದೆ ಇದ್ದೀತೆ?. ಯಾಕೋ ಅವನು ಅದರ ಅರ್ಜಿ ತುಂಬುತ್ತಿರುವಾಗ ಮಾತನಾಡಿಸಲೇಬೇಕು ಅನಿಸಿತು. ಸೀದಾ ಆತನ ಹತ್ತಿರ ಹೋಗಿ ಕೇಳಿದೆ ನಿಮ್ಮ ಹೆಸರೇನು? ಅಂತ. ಆತ ತನ್ನ ಹೆಸರು ಹೇಳಿದ. ಅದಕ್ಕೆ ಹೇಳಿದೆ, ನೀವು ರಕ್ತ ಕೊಡುತ್ತಿರುವ ಮಾಲತಿ ಶರ್ಮಾ ನನ್ನ ಅಮ್ಮ ಅಂತ. “ನಿಮ್ಮಿಂದ ದೊಡ್ಡ ಉಪಕಾರವಾಯಿತು. ನಿಮಗೆ ದೊಡ್ಡ ಧನ್ಯವಾದ” ಅಂದೆ. ನನಗೆ ಬೇಕಿದ್ದರೆ ೪೦೦ ರೂ ಕೊಟ್ಟರೆ ೨ನೇ ಬಾಟಲಿ ರಕ್ತ ಆ ಕೂಡಲೇ ಸಿಗುತ್ತಿತ್ತು. ಆದರೆ ಆ ವ್ಯಕ್ತಿ ಮೆರೆದ ಮನುಷ್ಯತ್ವ ನನ್ನ ಮನಸ್ಸಿಗೆ ತಾಕಿತ್ತು. ಮೊದಲನೆ ಬಾಟಲ್ ರಕ್ತ ಒಮೆಗಾ ಆಸ್ಪತ್ರೆಗೆ ಕೊಟ್ಟು ಎರಡನೇ ಬಾಟಲ್ ಅನ್ನು ಆತ ರಕ್ತದಾನ ಮಾಡಿದ ಮೇಲೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ. ನಾನು ಮೊದಲ ಬಾಟಲ್ ಕೊಟ್ಟು ಬರುವಷ್ಟರಲ್ಲಿ ಆತ ತನ್ನ ಕೆಲಸ ಮುಗಿಸಿ ಹೊರಟು ಹೋಗಿ ಆಗಿತ್ತು. ಆತ ನನಗೆ ಮತ್ತೆ ಸಿಗುತ್ತಾನಾ?... ಗೊತ್ತಿಲ್ಲ.

ಇನ್ನೊಂದು ಘಟನೆ ತುಂಬ ವಿಚಿತ್ರವಾದದ್ದು. ನಮ್ಮಲ್ಲೇ ಇರುವ ಸರಿಯೋ ತಪ್ಪೋ ಎಂಬ ಮನೋಭಾವನೆಗೆ ಸಂಬಂಧಪಟ್ಟಿರುವಂತಹುದು. ಆ ಘಟನೆ ನಡೆದದ್ದು ನನ್ನ ಅಮ್ಮ ಮರಣ ಹೊಂದಿದ ದಿನ. ನಮಗೆ ಆಪದ್ಬಾಂಧವ ಅಂತ ಇರುವವರು ನನ್ನ ಅಕ್ಕ(ದೊಡ್ಡಮ್ಮನ ಮಗಳು)ನ ಗಂಡ ಗಣೇಶ್ ಹೆಬ್ಬಾರ್ ಅಂತ. ಮರಣ ಹೊಂದಿದ ಕೂಡಲೇ ಎಲ್ಲ ಕಾರ್ಯಗಳನ್ನು ನಿರ್ವಹಿಸಿ ಹೆಣ ಹೊರಲು ಕೂಡ ನೆರವಾದರು. ನಮ್ಮ ಕಡೆ ಒಂದು ಅಲಿಖಿತ ನಂಬಿಕೆಯಿದೆ. ಅಪ್ಪ ಮತ್ತು ಅಮ್ಮ ಇದ್ದವರು ಹೆಣವನ್ನು ಮುಟ್ಟುವಂತಿಲ್ಲ ಎಂದು. ಆದರೆ ಇವರು ಆ ನಂಬಿಕೆಯನ್ನೇ ಬದಿಗಿಟ್ಟು ನಮಗೆ ಸಹಾಯ ಮಾಡಿದ್ದರು. ನಾನು ಮನೆಗೆ ಬಂದಾಗ ನನ್ನ ಅಕ್ಕ ನನ್ನಲ್ಲಿ ಹೇಳಿದಳು. ಈ ನನ್ನ ಭಾವ ಹೆಣ ಎತ್ತುತ್ತಿರುವಾಗ ಅವರ ಹೆಂಡತಿಯಲ್ಲಿ ಅನೇಕರು, “ನಿನ್ನ ಗಂಡನಲ್ಲಿ ಹೆಣ ಮುಟ್ಟಬೇಡ ಹೇಳು” ಎಂದು ಹೇಳುತ್ತಿದ್ದರಂತೆ. ಅದಕ್ಕೆ ಅವಳು, “ನನಗೆ ಅವರು ಮಾಡುತ್ತಿರುವ ಕೆಲಸದಲ್ಲಿ ತಪ್ಪು ಕಾಣಿಸುತ್ತಿಲ್ಲ. ಮಾಡಲಿ ಬಿಡಿ” ಅಂತ ಬಾಯಿ ಮುಚ್ಚಿಸಿದಳಂತೆ. ದಂಪತಿಗಳೆಂದರೆ ಹಾಗೆ ಇರಬೇಕು ಅಲ್ಲವೆ? ಒಬ್ಬರು ಮಾಡಿದ ಕೆಲಸವನ್ನು ಸರಿ ಇದೆ ಅನಿಸಿದಾಗ ಇನ್ನೊಬ್ಬರು ಸಮರ್ಥಿಸಬೇಕು. ಅದರ ಮರುದಿನ ಭಾವ ನನ್ನಲ್ಲಿ ಹೇಳುತ್ತಿದ್ದರು, “ಯಾರೋ ಹೆಣ ಮುಟ್ಟಬಾರದು ಹೇಳುತ್ತಿದ್ದರಂತೆ. ನಾನು ಪಿಯುಸಿ ಮಾಡುತ್ತಿರುವಾಗ ಒಬ್ಬರನ್ನು ತೊಡೆಯಲ್ಲಿ ಕೂರಿಸಿಕೊಂಡು ಬೆಂಗಳೂರಿನಿಂದ ಶಿವಮೊಗ್ಗ ತನಕ ಬಂದಿದ್ದೆ” ಅಂತ. ಹೌದು! ಯಾವುದೇ ಕೆಲಸ ಮಾಡುವುದಕ್ಕೂ ಯಾರು ಏನು ಹೇಳುತ್ತಾರೆ ಎಂದು ಲೆಕ್ಕಿಸದೆ ಕೆಲಸ ಮಾಡಬೇಕೆಂದರೆ, ಅದಕ್ಕೆ ಧೈರ್ಯ ಮುಖ್ಯ. ಕಾರ್ಯಕ್ರಮವೆಲ್ಲ ಮುಗಿದ ನಂತರ ಉಳಿದ ಹಿರಿಯರಿಗೆ ನಮಸ್ಕರಿಸುತ್ತಿರುವಾಗ ಈ ನನ್ನ ಅಕ್ಕ, ಭಾವನವರನ್ನು ಕೂಡ ಕರೆದು ನಮಸ್ಕಾರ ಮಾಡಿದೆ. ಆಗ ಆ ಮಹಾತಾಯಿಯ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ತಮ್ಮ ಕೆಲಸವನ್ನು ಗುರುತಿಸಿದರಲ್ಲ ಎನ್ನುವ ಸಮಾಧಾನ ಅದರಲ್ಲಿ ಇತ್ತೇನೋ?... ಗೊತ್ತಿಲ್ಲ.

ಹೀಗೆ ಕೆಲವರು ತಮ್ಮ ಪುಟ್ಟ ಕೆಲಸಗಳಿಂದ ನಮ್ಮಲ್ಲಿ ಅಳಿಸಲಾಗದ ಹೆಜ್ಜೆಗಳನ್ನು ಬಿಟ್ಟು ಹೋಗಿರುತ್ತಾರೆ. ನನಗೆ ಈ ಮೇಲಿನ ಘಟನೆಗಳು ಮನಸ್ಸಿಗೆ ತಾಕಿದ್ದು ಯಾಕೆಂದರೆ, ಇವೆರಡೂ ಘಟನೆಗಳು ಹಣವನ್ನು ಮೀರಿದಂಥವು. ನಾವು ಹೇಳುತ್ತಿರುತ್ತೇವೆ, ನಾನು ನನ್ನಿಂದಾದಷ್ಟು ಮಾಡಿದೆ ಎಂದು. ಅದರ ಬದಲು ನಾವು ಏನು ಅಗತ್ಯವಿದೆ ಎನ್ನುವುದನ್ನು ಅರಿತು ಕೆಲಸ ಮಾಡುವುದು ಜಾಣತನ. ಇಲ್ಲೊಂದು ವಿನ್ ಸ್ಟಲ್ ಚರ್ಚಿಲ್ ಅವರ ಮಾತಿದೆ. "It is no use saying, 'We are doing our best.' You have got to succeed in doing what is necessary" ಅಂತ. ನಾವು ಹಲವು ಸಲ ನಮ್ಮದೇ ಆದ ಚೌಕಟ್ಟಿನೊಳಗೆ ಯೋಚಿಸುತ್ತಿರುತ್ತೇವೆ. ಅದರಾಚೆ ನಮ್ಮ ಯೋಚನೆಗಳು ಸಾಗುವುದೇ ಇಲ್ಲ. “ಚಾಪೆ ಇದ್ದಷ್ಟೆ ಕಾಲು ಚಾಚು” ಎನ್ನುವುದು ಲೋಕರೂಢಿಯ ಮಾತು. ಆದರೆ ಕೆಲವರು ತನ್ನಿಂದ ಒಂದು ಸಹಾಯ ಆಗುವುದಾದರೆ ಚಾಪೆಯ ಹೊರಗೆ ಕಾಲು ಚಾಚಿದರೆ ಏನಾಗುತ್ತದೆ ನೋಡೋಣ ಎಂದು ಯೋಚಿಸುತ್ತಾರೆ. ಹಾಗಾಗಿಯೇ ಅಂಥವರು ಮನಸ್ಸಿಗೆ ಹತ್ತಿರವಾಗುತ್ತಾರೆ. ಹಲವು ಸಲ ನಾನು ಕೂಡ ಇಂತಹ ಹಣದಿಂದ ಕೊಳ್ಳಲಾರದಂತಹ ಕೆಲಸ ಮಾಡಬೇಕು ಅಂದುಕೊಳ್ಳುತ್ತೇನೆ. ಯಾವಾಗ ಮಾಡುತ್ತೇನೆ? ಎನ್ನುವುದು ಗೊತ್ತಿಲ್ಲ. ಆದರೆ ನನ್ನ ಅಂತಹ ಒಂದು ಪ್ರಯತ್ನ ಯಾವಾಗಲೂ ಜಾರಿಯಲ್ಲಿರುತ್ತದೆ.

Wednesday, July 11, 2007

ಬಾಳ ಪಯಣದ ಸಿಂಹಾವಲೋಕನ…

“Being unwanted, unloved, uncared for, forgotten by everybody, I think that is a much greater hunger, a much greater poverty than the person who has nothing to eat.” -- Mother Teresa.

ನಾನು ಏಕಾಂಗಿಯಾಗಿ ಬೆಂಗಳೂರಿಗೆ ಬಂದಿಳಿದಾಗ ನನ್ನ ಕೆಲವು ಬೆರಳೆಣಿಕೆಯ ಗೆಳೆಯರು ಬಿಟ್ಟರೆ ಬೇರೆ ಯಾರೂ ನನಗೆ ಗೊತ್ತಿರಲಿಲ್ಲ. ಯಾರ ಸಹಾಯವೂ ಇಲ್ಲದೆ ಬೆಂಗಳೂರಿಗೆ ಬಂದು ಒಂದು ರೂಮ್ ಮಾಡಿಕೊಂಡಿದ್ದೆ. ಗೆಳೆಯರೆಲ್ಲ ವೀಕೆಂಡ್ ನಲ್ಲಿ ೨ ಗಂಟೆ ಸಿಗುತ್ತಾರೆ, ಹೋಗುತ್ತಾರೆ. ಆದರೆ ಆಗ ನನಗೆ ಒಂಥರ ವಿಚಿತ್ರ ಯೋಚನೆಗಳು. ಒಂದು ರೀತಿ ನೋಡಿದರೆ ನನಗೆ ಎಲ್ಲರೂ ಇದ್ದಾರೆ; ಇನ್ನೊಂದಡೆ ನೋಡಿದರೆ ನನಗೆ ಬೇಕಾದವರು ಯಾರೂ ಇಲ್ಲ. ಹಾಸ್ಟೆಲಿನ ಗೆಳೆಯರ ಸಾಲನ್ನೆ ಮರೆತು, ಒಂದು ರೀತಿಯಲ್ಲಿ ಒಂಟಿ ಜೀವಿಯಾಗಿ ಬದುಕಬೇಕಾದ ಕಾಲ ಬಂದಿತ್ತು. ಆಗ ನನಗೆ ಹೊಳೆದಿದ್ದೆ ಹೊಸ ಹೊಸ ಯೋಚನೆಗಳು. ಈ ಹೊಸ ಯೋಚನೆಗಳು ನನ್ನ ಜೀವನದ ಸಂತೋಷಕ್ಕೆ ದಾರಿ ಆಗಬಹುದು ಎಂದು ನಾನು ಆರಂಭಿಸಿದ ಕ್ಷಣದಲ್ಲಿ ಯೋಚಿಸಿರಲಿಲ್ಲ. ನನಗೆ ಕೆಲವು ವಿಷಯಗಳನ್ನು ನಿಮ್ಮಲ್ಲೂ ಹಂಚಿಕೊಳ್ಳೋಣ ಅನಿಸಿತು. ಕೆಲವು ತುಣುಕುಗಳು ಇಲ್ಲಿವೆ.

ನಾನು ಮಲ್ಲೇಶ್ವರದ ಒಂದು ಹಣ್ಣಿನ ವ್ಯಾಪಾರ ಮಾಡುವ ಹೆಣ್ಣಿಗೆ ಹಣ್ಣು ಖರೀದಿಸುವ ಖಾಯಂ ಗಿರಾಕಿ. ಮೊದ ಮೊದಲು ನಾನು ಹಣ್ಣು ನೋಡಿ “ಬೆಲೆ ಎಷ್ಟು?” ಎಂದು ಕೇಳುತ್ತಿದ್ದೆ. ಅವಳು “೩೦ ರುಪಾಯಿ ಸರ್” ಎಂದು ಹೇಳುತ್ತಿದ್ದಳು. ಒಂದು ದಿನ ನನ್ನ ಪಕ್ಕ ಬಂದವನು “ಅಕ್ಕ ಎಷ್ಟು ಇದಕ್ಕೆ?” ಎಂದ. ಆಗ ನನಗೆ ಅನಿಸಿತು, ನಾವು ಯಾಕೆ ಬರೀ ನಮ್ಮ ಸಂಬಂಧಿಕರಿಗೆ ಮಾತ್ರ ಅಕ್ಕ, ಅಣ್ಣ ಎಂದು ಕರೆಯುತ್ತೇವೆ? ಬೇರೆಯವರಿಗೆ ಯಾಕೆ ಕರೆಯುವುದಿಲ್ಲ? ಎಂದು. ನಾನು ದಕ್ಷಿಣ ಕನ್ನಡದವನಾದ್ದರಿಂದ ಇಂಥ ಪದಗಳ ಬಳಕೆ ತುಂಬಾ ಕಡಿಮೆ. ಆ ದಿನ ಪ್ರಥಮ ಬಾರಿಗೆ ನಾನು ನನ್ನ ಜಾತಿ ಬಿಟ್ಟು ಯೋಚನೆ ಮಾಡಿದ್ದೆ. ಆವತ್ತು ನನಗೆ ಬೆಳೆಯಬೇಕೆಂದರೆ ಜಾತಿ ಮತ್ತು ಭಾಷೆ ಮೀರಿ ಬೆಳೆಯಬೇಕು ಅನಿಸಿತ್ತು.

ಮತ್ತೊಮ್ಮೆ ಅಲ್ಲಿ ಹೋದಾಗ “ ಅಕ್ಕ ಇದರ ಬೆಲೆ ಎಷ್ಟು?” ಎಂದು ಕೇಳಲು ಹೊರಟೆ. ಆದರೆ ಅವತ್ತು ಬಾಯಿಯಿಂದ “ಅಕ್ಕ” ಎನ್ನುವ ಪದ ಹೊರಗೆ ಬರಲೇ ಇಲ್ಲ. ಮೊದಲನೆ ಸಲ ನನಗೆ ಸಂಬಂಧಿಕರಲ್ಲದವರನ್ನು ನಮ್ಮವರ ಥರ ನೋಡುವುದು ಎಷ್ಟು ಕಷ್ಟ ಎನ್ನುವುದು ಅರಿವಾಗಿತ್ತು. ಕೆಲವು ದಿನಗಳ ನಂತರ ನನಗೆ ಕರೆಯುವುದು ರೂಢಿಯಾಯಿತು. ಈಗ ನಾನು ತುಂಬಾ ವ್ಯತ್ಯಾಸವನ್ನು ಕಂಡು ಹಿಡಿದಿದ್ದೇನೆ. ಸರ್ ಅಂತ ಕರೆಯುತ್ತಿದ್ದವಳು ಈಗ ಅಣ್ಣ ಎನ್ನುತ್ತಾಳೆ. ೩೦ ರುಪಾಯಿ ಅಂತ ಹೇಳಿ ನಿಮಗೆ ೨೫ ಎನ್ನುತ್ತಾಳೆ. ನನಗೆ ಇನ್ನೊಂದು ತುಂಬಾ ಇಷ್ಟವಾದ ವಿಷಯ ಎಂದರೆ ಕೆಲವು ಸಲ “ನೀವು ಚೆನ್ನಾಗಿರ್ಬೇಕಣ್ಣ” ಎನ್ನುತ್ತಾಳೆ.

ಕೆಲವು ದಿನಗಳ ಹಿಂದೆ ಮಲ್ಲೇಶ್ವರ ಮೈದಾನದ ಮೂಲೆಯೊಂದರಲ್ಲಿ ಕುಳಿತಿದ್ದಾಗ ಒಬ್ಬ ಮಹಿಳೆ ಬಂದು, “ಮಗಾ, ನಿನಗೆ ಒಳ್ಳೆಯದಾಗತ್ತೆ, ಒಂದು ರುಪಾಯಿ ಕೊಡು ಮಗಾ” ಎಂದಳು. ನಾನು ಹೆಚ್ಚಾಗಿ ಯಾರಿಗೂ ಭಿಕ್ಷೆ ನೀಡುವುದಿಲ್ಲ. ನನಗೆ ಬೇಡುವವರ ಅಸಹಾಯಕತೆ ಇಷ್ಟವಾಗುವುದಿಲ್ಲ. ಆದರೆ ನಾನು ಇವಳಿಗೆ ಯೋಚಿಸಿ ಒಂದು ರೂಪಾಯಿಯನ್ನು ನೀಡಿದ್ದೆ. ನಾನು ಯಾಕೆ ಕೊಟ್ಟೆ? ಅಂತ ನಿಮಗೆ ಅನಿಸಬಹುದು. ನನಗೆ ಅವಳ ಮಾತು ಇಷ್ಟವಾಗಿತ್ತು. ನೀವು ಗುರುತಿಸಿದ್ದೀರಾ ಎನ್ನುವುದು ನನಗೆ ಗೊತ್ತಿಲ್ಲ. ಆದರೆ “ನಿನಗೆ ಒಳ್ಳೆಯದಾಗಲಿ”, “ನೀನು ಚೆನ್ನಾಗಿರಬೇಕು” ಎಂದು ನನಗೆ ಹೇಳಿದವರನ್ನು ನಾನು ಲೆಕ್ಕ ಹಾಕಬಲ್ಲೆ. ಈ ಜಗತ್ತಿನಲ್ಲಿ ಹೆಚ್ಚಿನವರಿಗೆ ಕಾಲು ಎಳೆಯುವುದರ ಬಗ್ಗೆ ಮಾತ್ರ ಚಿಂತೆ, ಒಳ್ಳೆ ಮಾತುಗಳನ್ನು ಆಡಲು ಸಹ ಸಮಯವಿರುವುದಿಲ್ಲ. ಅಂಥವರ ಮಧ್ಯೆ ಇರುವ ನನ್ನಂಥವರಿಗೆ ಒಂದು ಒಳ್ಳೆಯ ಮಾತು ಕೇಳಿದಾಗ ಮನಸ್ಸಿನ ಮೂಲೆಯಲ್ಲೊಂದು ಸಂತೋಷ.

ನಾನು ಒಂದು ಇಂಗ್ಲಿಷ್ ಲೆಕ್ಚರ್ ನ pdf document ಓದಿದ್ದೆ. ಅದರಲ್ಲಿ ಯಾವತ್ತೂ ನಾವು ನಮ್ಮ ಸುತ್ತ ಮುತ್ತ ಇರುವವರನ್ನು ನಮ್ಮ ಸಂಬಂಧಿಕರ ಥರ ನೋಡಿಕೊಂಡರೆ, ಅವರಿಂದ ನಮ್ಮ ಕಡೆ ಒಂದು ಗೌರವ ಇರುತ್ತದೆ ಎಂದು ಬರೆದಿತ್ತು. ನನಗೆ ಒಂದು experiment ಮಾಡಿಯೆ ಬಿಡೋಣ ಅನಿಸಿತು. ಅವತ್ತಿನಿಂದ ನಮ್ಮ ವಾಹನ ಚಾಲಕನ ಹೆಸರು ಕರೆಯುವುದನ್ನು ಬಿಟ್ಟು “ಅಣ್ಣ” ಎಂದು ಕರೆಯಲು ಪ್ರಾರಂಭಿಸಿದೆ. ಇವತ್ತು ನಾನು ನನ್ನ ಕಂಪೆನಿಯ ವಾಹನ ಚಾಲಕನಲ್ಲಿ ಒಂದು ವ್ಯತ್ಯಾಸವನ್ನು ಗಮನಿಸಿದ್ದೇನೆ. ಹಾಗೆ ನನಗೆ ಒಂದು ಅಭ್ಯಾಸವಿದೆ. ನನ್ನ ಗೆಳೆಯರ ಅಮ್ಮಂದಿರನ್ನು “ಆಂಟಿ” ಎಂದು ಕರೆಯುವ ಬದಲು “ಅಮ್ಮ” ಎಂದೆ ಕರೆಯುತ್ತೇನೆ. ನಾನು ಹಾಗೆ ಕರೆದ ಮೇಲೆ ಆ ಅಮ್ಮಂದಿರು ನನ್ನನ್ನು ನೆನಪು ಇಟ್ಟುಕೊಂಡಿರುವುದನ್ನು ಗಮನಿಸಿದ್ದೇನೆ.

ಒಂದು ಕಾಲದಲ್ಲಿ ನಾನು ಶಂಕರ್ ನಾಗ್ ನ “ ಅನಾಥ ಮಗುವಾದೆ ..ನಾನು” ಎನ್ನುವ ಹಾಡನ್ನು ಗುನುಗುತ್ತಾ ಕೂತಿದ್ದೆ. ಆದರೆ ನನಗೆ ಅನಿಸಿದ್ದು, ನಿಜವಾಗಿ ಇಲ್ಲಿ ಹೆಚ್ಚಿನವರು ಅನಾಥರಲ್ಲ. ಅನಾಥರನ್ನಾಗಿ ಮಾಡುವುದು ನಮ್ಮ ಆಲೋಚನೆ ಎನ್ನುವುದನ್ನು ಮನಗಂಡಿದ್ದೇನೆ. ಎಷ್ಟೋ ಮಂದಿ ಜೀವನ ಬೋರು ಕಣೊ! ಎಂದು ಹೇಳಿಕೊಂಡು ಕುಡಿತ, ಸಿಗರೇಟು ಸೇದುವುದನ್ನು ನೋಡಿದ್ದೇನೆ. ಅವರಿಗೆ ಬದುಕಿನ ಸಣ್ಣ ಪುಟ್ಟ ಸಂತೋಷಗಳ ಅರಿವಿರುವುದಿಲ್ಲ. ತಮ್ಮ ನಾಳೆಯ ಬದುಕೆಂಬ ಮಹಲನ್ನು ಕಟ್ಟಬೇಕೆಂಬ ಆಸೆಯಿರುವುದಿಲ್ಲ. ನನಗೆ ಇವತ್ತು ತುಂಬ ಜನ ಕಷ್ಟ ಸುಖ ಕೇಳುವವರಿದ್ದಾರೆ; ಹೇಳುವವರಿದ್ದಾರೆ. ನಮ್ಮ ಜೀವನ ಇರುವುದು ಇಂತಹ ಸುಂದರವಾದ ಸಂಬಂಧಗಳಲ್ಲೆ ಅಲ್ಲವೆ? ನಿಮಗೇನನಿಸುತ್ತದೆ? “ನಿಮಗೆ ಒಳ್ಳೆಯದಾಗಲಿ”.

ಮಜಾ ಮಾಡಿ .!