Sunday, August 8, 2010

ಅಮ್ಮ ನಾನು ದೇವರಾಣೆ... ಬೆಣ್ಣೆ ಕದ್ದಿಲ್ಲಮ್ಮ ...

ಅವತ್ತೊಂದು ದಿನ ಮಲ್ಲೇಶ್ವರಂ ನ ಮೈದಾನದಲ್ಲಿರುವ ಕಲ್ಲು ಮೆಟ್ಟಿಲಿನಲ್ಲಿ ಕುಳಿತಿದ್ದೆ. ಅವತ್ತಿನ ದಿನ ಸಣ್ಣ ಹುಡುಗರಿಗೆ ಬಾಸ್ಕೆಟ್ ಬಾಲ್ ತರಬೇತಿ ನಡೆಯುತ್ತಿತ್ತು. ಹಾಗಾಗಿ ಪ್ರಾಕ್ಟೀಸ್ ನಡೆಯುತ್ತಿತ್ತು. ಮೊದಲು ಕೈ ಕಾಲು ಎಲ್ಲ ಸರಿಯಾಗಿ ಹಗುರವಾಗಲು exercise ಮಾಡುತ್ತಿದ್ದರು. ಆಗ ನನಗೆ ಒಬ್ಬ ನೀಲಿ ಬಣ್ಣದ ಬಟ್ಟೆ ತೊಟ್ಟಿದ್ದ ಹುಡುಗನ ಕಡೆಗೆ ದೃಷ್ಟಿ ಹೊರಳಿತು. ಸಣ್ಣ ಹುಡುಗ ಸ್ವಲ್ಪ ಪೋಲಿ :-P. ಏನೂ ಗೊತ್ತಿಲ್ಲದವರ ತರ ಕೈ ಕಾಲು ತಿರುಗಿಸುತ್ತಿದ್ದ. ಕಾಟಾಚಾರಕ್ಕೆ ಮಾಡುತ್ತಾರಲ್ಲ ಹಾಗೆ. ಬಹುಶಃ ಹೊಸಬ ಇರಬೇಕು ಎಂದು ಯೋಚಿಸುವಷ್ಟರಲ್ಲಿ ಅವನ ಮಾಸ್ಟರ್ ಅವನತ್ತ ನೋಡಿದಾಗ ಹುಡುಗ ಸರಿಯಾಗಿ ಅಟೆನ್ಷನ್ !. ಓಹ್ ಇದು ಮನಸ್ಸಿಲ್ಲದ ಮನಸ್ಸಿನಿಂದ ಹುಡುಗ ಮಾಡುತ್ತಿರುವುದೆಂದು ನನಗೆ ಅರಿವಾಯಿತು. ಅವನಿಗೆ ಆಡುವುದು ಬೇಕಾಗಿತ್ತು. ಕೈ ಕಾಲು, ಕುತ್ತಿಗೆ ತಿರುಗಿಸುವುದರಲ್ಲಿ ಇಷ್ಟವಿರಲಿಲ್ಲ. ಇವನ ನಾಟಕ ಅರಿಯಲು ಅವನ ಗುರುವಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ಹಿಡಿದು ತಂದು ಎಲ್ಲರ ಮಧ್ಯೆ ನಿಲ್ಲಿಸಿಬಿಟ್ಟ. (ಫೋಟೋದಲ್ಲಿ ಮಧ್ಯದಲ್ಲಿರುವವನೇ ಆ ಹುಡುಗ)



ಈಗ ಹುಡುಗನಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಮಧ್ಯದಲ್ಲಿರುವ ಇವನನ್ನು ನೋಡಿಯೇ ಎಲ್ಲರೂ ಮಾಡಬೇಕು. ಅದು ನಿಯಮ. ಹುಡುಗ ಸರಿಯಾಗಿ exercise ಮಾಡುವತ್ತ ಗಮನ ಹರಿಸಲಿಕ್ಕೆ ಪ್ರಾರಂಭ ಮಾಡಿದ. ಅವನ ಗುರುವಿನ ಮೇಲೊಂದು ನನ್ಗೆ ಮೆಚ್ಚುಗೆಯೂ ಬಂದಿತು. ಅದೇ ಕಾಲಕ್ಕೆ ನಾನು ನನ್ನ ಹಿಂದಿನ ಕಥೆಯತ್ತ ಹೊರಳಿದೆ. ಹಲವರು ಹೇಳುತ್ತಿರುತ್ತಾರೆ, ಭೂತಕಾಲವನ್ನು ಮರೆತವನು ಎಂದಿಗೂ ಯಶಸ್ಸು ಗಳಿಸಲು ಸಾಧ್ಯವಿಲ್ಲ ಅಂತ.


ನಾನು ಸಣ್ಣವನಿರುವಾಗ ದೈಹಿಕ ಶಿಕ್ಷಕರು ಅಟೆನ್ಷನ್, ರೈಟ್, ಲೆಫ್ಟ್ ಎನ್ನುವ ವಿಷಯದಲ್ಲಿ ತುಂಬಾ ಆಸಕ್ತಿಯಿತ್ತು ನನಗೆ. ಆಗ ನಾನೊಬ್ಬ ಶಿಸ್ತಿನ ಸಿಪಾಯಿ. ಮೂಗಿನ ಮೇಲೆ ಮುಂಗೋಪ ಇರುವ ಭಂಡ. ಹಾಗಾಗಿ ಹೆಚ್ಚಾಗಿ ಯಾವುದಾದರೊಂದು ತಂಡಕ್ಕೆ ನಾಯಕ. ನಾಯಕನಾಗಲು ನನ್ನ ಶಿಕ್ಷಕರ ಕೈ ಕೂಡ ಇತ್ತು ಎನ್ನುವುದು ಸುಳ್ಳಲ್ಲ. ಯಾಕೋ ಏನೋ ಶಿಕ್ಷಕರ ಹತ್ತಿರವೇ ಬೆಳೆದು ಬಂದಿದ್ದೆ. ಕೆಲವು ಶಿಕ್ಷಕರು ಅವರು ಇನ್ ಚಾರ್ಜ್ ಇದ್ದ ಕ್ಲಾಸ್ ಗೆ ನನ್ನನ್ನು ಹಾಕಿಸಿಕೊಂಡು ನಾಯಕನನ್ನಾಗಿ ಮಾಡಿದ ಉದಾಹರಣೆಗಳುಂಟು. ನನಗೆ ನನ್ನ ಶಿಕ್ಷಕರಲ್ಲಿ ಇಷ್ಟವಾದ ವಿಷಯವೆಂದರೆ, ನನಗೆ ಹತ್ತಿರವಿದ್ದ ಹಲವು ಶಿಕ್ಷಕರು ನನ್ನ ಪ್ರಶ್ನೆಗಳಿಗೆ "ಸುಮ್ಮನಿರು" ಎನ್ನುವುದನ್ನು ಬಿಟ್ಟು ಅವರಿಗೆ ತಿಳಿದಿದ್ದನ್ನು ಹೇಳುವವರಾಗಿದ್ದರು. ಹಾಗಾಗಿ ಎಷ್ಟೋ ಸಲ ಎದುರು ನಿಂತು ಲೆಫ್ಟ್, ರೈಟ್ ಅಂದಿದ್ದೆ. ಇವತ್ತಿಗೂ ಹಲವು ಆಂಟಿಗಳಿಗೆ ಮಗನಾಗಿಯೇ ಇದ್ದೇನೆ. ಆದರೆ ಸಮ ವಯಸ್ಕ ಹುಡುಗಿಯರಿಗೇನೋ ಸರಿ ಬರುವುದಿಲ್ಲ :-P. ಬಹುಶಃ ನನ್ನನ್ನು ನೋಡಿದಾಗ ಹಾರ್ಟ್ ಬೀಟ್ ಜಾಸ್ತಿಯಾಗುವುದು ಕಾರಣವಿರಬಹುದು. ಸ್ವಲ್ಪ height of optimism ಆಯಿತು ಅಂತೀರಾ?

 ನಾವು ಬೆಣ್ಣೆ ಕದ್ದಿಲ್ಲಮ್ಮ ಅನ್ನುವ ದಿನಗಳೆಷ್ಟೋ. ಈ ಹುಡುಗ ಅದಕ್ಕೊಂದು ಉದಾಹರಣೆಯಷ್ಟೆ. ಸಣ್ಣವನಿರುವಾಗ ಮಾಡಿದ ಹಲವು ಸಣ್ಣ ಸಣ್ಣ ಅಭ್ಯಾಸಗಳೇ ಇಂದು ನನ್ನನ್ನು ರೂಪಿಸಿವೆ ಎಣಿಸಿಕೊಳ್ಳುತ್ತಿರುತ್ತೇನೆ. ಇನ್ನು ಕೆಲವು ವರ್ಷ ಕಳೆದರೆ ಮತ್ತೆ ರೈಟ್, ಲೆಫ್ಟ್ ಎನ್ನಬೇಕಾಗುತ್ತದೆ. ಆಗ ಆಡುವುದಕ್ಕಲ್ಲ, ಬದುಕುವುದಕ್ಕೆ. ಅಲ್ವೇ ?? :)

Sunday, July 4, 2010

ಬಿ.ಎಂ.ಟಿ.ಸಿ. ಕಥೆಗಳು - ಭಾಗ 2

ಎಷ್ಟೊಂದು ರೂಪಗಳು

ಕಣ್ ಎದುರಿನಲ್ಲಿ

ಎಷ್ಟೊಂದು ಭಾವಗಳು

ಮನದ ಆಳದಲ್ಲಿ !!


ಜೀವನದಲ್ಲಿ ಎಷ್ಟೊಂದು ಸಲ ಹಾಗಾಗುತ್ತದಲ್ಲವೇ. ಕುಳಿತಲ್ಲಿಯೇ ಮನ:ಪಟಲದಲ್ಲಿ ಹಲವು ಭಾವನೆಗಳು ಹಾದು ಹೋಗುತ್ತಿರುತ್ತವೆ. ಯೋಚನೆಗಳು ನಡೆದಾಗ ಕೆಲವು ಸಲ ಸಮಯವೇ ನಿಂತು ಹೋದಂತೆ ಭಾವವಾಗುತ್ತದೆ. ಆದರೆ ನಮಗೋಸ್ಕರ ಸಮಯ ನಿಲ್ಲಬೇಕಲ್ಲವೇ. ಸಮಯವೂ ನಿಲ್ಲದು.. ಹಾಗೆಯೇ ಬಿ.ಎಂ.ಟಿ.ಸಿ ಬಸ್ ಕೂಡ !!


ನನ್ನ ಆಫೀಸಿನಲ್ಲಿ ಒಬ್ಬನಿಗೆ ಆಗಷ್ಟೇ ಹುಡುಗಿ ಗೊತ್ತಾಗಿತ್ತು. ಮರುದಿನವೇ ನಿಶ್ಚಿತಾರ್ಥ. ಹುಡುಗಿ ಬನಶಂಕರಿ ಕತ್ರಿಗುಪ್ಪೆ ಬಿಗ್ ಬಜಾರ್ ಹತ್ತಿರ ಬರ ಹೇಳಿದ್ದಳು. ಆದರೇನು ಮಾಡುವುದು ಹೇಳಿ, ಹುಡುಗನಿಗೇನೋ ಹುಡುಗಿಯದೇ ಗುಂಗು. ಕೆಂಗೇರಿಯಿಂದ 500 ನಂಬರ್ ನ ಬಸ್ ಹತ್ತಿದ ಪುಣ್ಯಾತ್ಮ. ಹುಡುಗಿಯ ಕನಸಿನಲ್ಲಿ ಕುಳಿತಲ್ಲೇ ಮೈ ಮರೆತ. ಕನಸಿನಿಂದ ಹೊರ ಬಂದಾಗ ನೋಡುತ್ತಾನೆ, ಜೆ.ಪಿ. ನಗರ ಮುಟ್ಟಿದ್ದಾನೆ. ಆಮೇಲೆ ತಿಳಿಯಿತು ಅಣ್ಣಾವ್ರಿಗೆ, ತಾನು ಸುಮಾರು ದೂರ ಮುಂದೆ ಬಂದು ಬಿಟ್ಟಿದ್ದೇನೆಂದು. ಮೊದಲೇ ಆಫೀಸಿನಿಂದ ತಡವಾಗಿ ಬಿಟ್ಟಿದ್ದ. ಮೈ ಮರೆತಾಗ ಬಸ್ ಮುಂದೆ ಹೋದುದರ ಕಾರಣವಾಗಿ ಮತ್ತೆ ಪುನಃ ಒಂದು ಗಂಟೆ ತಡವಾಗಿ ತಲುಪಿದ. ಅವನಿಗಾಗಿ ಕಾದ ಹುಡುಗಿಯ ಕಥೆ ಏನಾಗಿರಬೇಕು? ನೀವೆ ಹೇಳಿ.

ಇನ್ನೊಂದು ಕಥೆ ಇದೆ ನೋಡಿ...


ಅದೊಂದು ದಿನ ಮೆಜೆಸ್ಟಿಕ್ ನಿಂದ ಕೆಂಗೇರಿ ಕಡೆಗೆ ಹೊರಟಿದ್ದೆ. ನಮ್ಮ ಬಸ್ ನಲ್ಲಿದ್ದ ಒಬ್ಬನಿಗೆ ನಾಯಂಡ ಹಳ್ಳಿಯಲ್ಲಿ ಇಳಿಯಬೇಕಾಗಿತ್ತು. ಕಷ್ಟ ಪಟ್ಟುಕೊಂಡು ಬಂದು ಮೊದಲನೆ ಸೀಟಿನಲ್ಲಿ ಕುಳಿತು ಪ್ರತಿ ನಿಲ್ದಾಣ ಬಂದಾಗಲೂ ಹೊರಗೆ ನೋಡುತ್ತಿದ್ದ. ಆದರೆ ಯಾರಲ್ಲೂ ತಾನು ಇಳಿಯುವ ಜಾಗದ ಬಗ್ಗೆ ಕೇಳಿರಲಿಲ್ಲ. ನೋಡು ನೋಡುತ್ತಿದ್ದಂತೇ ರಾಜ ರಾಜೇಶ್ವರಿ ನಗರ ಬಂದೆ ಬಿಟ್ಟಿತು.


ಪ್ರಯಾಣಿಕ: ಸಾರ್, ನಾಯಂಡ ಹಳ್ಳಿಯಲ್ಲಿ ಇಳೀಬೇಕಿತ್ತು.


ಡ್ರೈವರ್: ನಾಯಂಡ ಹಳ್ಳಿ ಹೋಯ್ತಲ್ಲಪ್ಪಾ !! ಎನ್ ಮಾಡ್ತಾ ಇದ್ದೆ?


ಪ್ರಯಾಣಿಕ: ಗೊತ್ತಗ್ಲಿಲ್ಲಣ್ಣ !!


ಈ ಮಾತು ಅಲ್ಲಿದ್ದ ಕಂಡಕ್ಟರ್ ಗೆ ಕೇಳಿಸಿಯೇ ಬಿಟ್ಟಿತು. ಇದ್ದಲ್ಲಿಂದಲೇ ಹೇಳಿದ:


"ಎನ್ ಗುರು? ಡ್ರೈವರ್ ಗುಂಡ ಗೆ ಇದ್ದಾನೆ ಅಂತ ನೋಡ್ತಾ ಕೂತ್ಕೊ ಬಿಟ್ಯಾ? ಅವ್ನು ಅವ್ನಾ ಕೆಲ್ಸಾ ಮಾಡ್ತಾನೆ ನೀನ್ ಇಳಿ"

Saturday, June 26, 2010

ಅವನೊಬ್ಬನಿದ್ದ ಅಲ್ ಬ್ರೆಕ್ಟ್ ಡ್ಯೂರರ್

"The next time you see a copy of that touching creation, take a second look. Let it be your reminder, if you still need one, that no one - no one - - ever makes it alone!"

    ಅವನೊಬ್ಬನಿದ್ದ ಅಲ್ ಬ್ರೆಕ್ಟ್ ಡ್ಯೂರರ್. ವಿಶ್ವದಲ್ಲೇ ತನ್ನ ಚಿತ್ರ ಕಲೆಗೆ ಹೆಸರು ವಾಸಿಯಾಗಿದ್ದ. ಅವನು ಗತಿಸಿ ಹೋಗಿ ಸುಮಾರು ಐನೂರು ವರ್ಷಗಳಾದರೂ ಇಂದಿಗೂ ಅವನ ಕೆಲವು ಕಲೆಗಳು ಮನುಷ್ಯನಿಗೆ ಹತ್ತಿರವಾಗಿವೆ. ಅವನು ರಚಿಸಿರುವ ಹಲವು ಕಲೆಗಳಲ್ಲಿ "Praying Hands" ಹೆಸರುವಾಸಿ.

    ನೂರೆಂಬರ್ಗ್ ಪಕ್ಕದ ಹಳ್ಳಿಯೊಂದರಲ್ಲಿ ಜನಿಸಿದ ಆಲ್ಬ್ರೆಕ್ಟ್ ಆವನ ಹೆತ್ತವರ ಹದಿನೆಂಟು ಮಕ್ಕಳಲ್ಲಿ ಒಬ್ಬ. ಅದೊಂದು ದಿನ ಆಲ್ಬ್ರೆಕ್ಟ್ ಮತ್ತು ಅವನ ತಮ್ಮನಿಗೆ ಚಿತ್ರಕಾರರಾಗಬೇಕೆಂಬ ಆಸೆಯಾಯಿತು. ಆದರೆ ಅವರ ಆಸೆಯನ್ನು ಕೈಗೂಡಿಸಲು ಅವರ ಅಪ್ಪನಿಗೆ ಸಾಧ್ಯವಿರಲಿಲ್ಲ. ಇಬ್ಬರಲ್ಲಿ ಒಬ್ಬರು ಪಕ್ಕದಲ್ಲಿಯೇ ಇರುವ ಮೈನಿಂಗ್ ಕಂಪೆನಿಗೆ ಹೋಗಿ ಕೆಲಸ ನಿರ್ವಹಿಸಿ ಮತ್ತೊಬ್ಬನಿಗೆ ಕಲಿಸಲು ಸಹಾಯ ಮಾಡಬೇಕಾಗಿತ್ತು. ಒಬ್ಬ ಕಲಿತ ನಂತರ ಆತ ಇನ್ನೊಬ್ಬನಿಗೆ ಕಲಿಸುವ ಮಾತು ಕೊಟ್ಟಾಗಿತ್ತು. ಇಂತಹ ಸಮಯದಲ್ಲಿ ಯಾರು ಮೊದಲೆಂದು ನಿರ್ಧರಿಸಲು ಅವರಿಬ್ಬರು ಆಯ್ದುಕೊಂಡ ಹಾದಿ "ನಾಣ್ಯ ಚಿಮ್ಮುಗೆ". ವಿಧಿ ಆಲ್ಬ್ರೆಕ್ಟ್ ನಿಗೆ ಚಿತ್ರಕಾರನಾಗುವ ಅವಕಾಶ ನೀಡಿತ್ತು.


    ಮುಂದಿನ ನಾಲ್ಕು ವರ್ಷಗಳಲ್ಲಿ ಆಲ್ಬ್ರೆಕ್ಟ್ ತನ್ನ ಚಿತ್ರ ಕಲಿಕೆ ಯನ್ನು ನಡೆಸಿದರೆ, ತಮ್ಮ ಮೈನಿಂಗ್ ಕಂಪೆನಿಯಲ್ಲಿ ಕೆಲಸ ಮಾಡಿ ಅಣ್ಣನಿಗೆ ಓದಿಸುತ್ತಿದ್ದ. ಆಲ್ಬ್ರೆಕ್ಟ್ ನ ಕಲೆಗಳು ಜನ ಜನಿತ ವಾಗುತ್ತಿದ್ದವು. ಕೊನೆಗೊಂದು ದಿನ ಆಲ್ಬ್ರೆಕ್ಟ್ ತಮ್ಮನಿಗೆ ಹೇಳುತ್ತಾನೆ. "ನೀನು ನನ್ನ ದೇವರಂತಹ ತಮ್ಮ. ಈಗ ಕಲಾಕಾರನಾಗುವ ಸರದಿ ನಿನ್ನದು. ಅದಕ್ಕೆ ತಗಲುವ ಎಲ್ಲಾ ಖರ್ಚು ವೆಚ್ಛಗಳನ್ನು ಭರಿಸಲು ನಾನು ಸಿದ್ಧ" ಎಂದು.


    ಈ ಮಾತನ್ನು ಕೇಳಿದ ಆಲ್ಬ್ರೆಕ್ಟ್ ನ ತಮ್ಮನಿಗೆ ಅಳು ತಡೆಯದಾಯಿತು. ಉಕ್ಕಿ ಹರಿಯುತ್ತಿದ್ದ ಕಣ್ಣೀರನ್ನು ತಡೆದುಕೊಂಡು ಹೇಳುತ್ತಾನೆ " ಅಣ್ಣ, ಇದು ನನ್ನಿಂದ ಆಗದ ಕೆಲಸ. ನನ್ನ ಸಮಯ ಆಗಿ ಬಿಟ್ಟಿದೆ. ನನ್ನ ಕೈಗಳನ್ನೊಮ್ಮೆ ನೋಡು. ಪ್ರತಿ ಬೆರಳಿನ ಮೂಳೆಗೂ ಒಂದಲ್ಲ ಒಂದು ಏಟು ಬಿದ್ದಿದೆ. ಕೈಯ ಚರ್ಮ ಕಿತ್ತು ಹರಿದಿದೆ. ನನ್ನಿಂದ ಒಂದು ಲೋಟವನ್ನು ಸರಿಯಾಗಿ ಅಲುಗಾಡದಂತೆ ಹಿಡಿಯಲಾಗುವುದಿಲ್ಲ. ಕ್ಯಾನ್ವಾಸ್ ನ ಮೇಲೆ ಹೇಗೆ ನಾಜೂಕಿನಿಂದ ಕೆಲಸ ಮಾಡಲಿ ಹೇಳು?. For me it is too late" ಎಂದು.

    ಆಲ್ಬ್ರೆಕ್ಟ್ ನ portraits, ಪೆನ್, ಚಿತ್ರಗಳು, ಬೆಳ್ಳಿಯ ಚಿತ್ರಗಳು, ತಾಮ್ರದ ಚಿತ್ರಗಳು, ವಾಟರ್ ಕಲರ್, ಮಸಿ, ಮರದ ತುಂಡುಗಳು ಇತ್ಯಾದಿ ಸುಮಾರು ಐನೂರು ವರುಷಗಳು ಕಳೆದರೂ ಇಂದಿಗೂ ವಿಶ್ವದ ಹಲವು ಸಂಗ್ರಹಾಲಯಗಳಲ್ಲಿವೆ. ಹಲವು ಮಂದಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ರವಿ ವರ್ಮನ ಚಿತ್ರಗಳ ಹಾಗೆ ಮನೆ, ಆಫೀಸಿನ ಕೋಣೆಯಲ್ಲಿ ಈತನ ಕಲೆಗಳನ್ನು ನೇತು ಹಾಕಿದ್ದಾರೆ. ಒಂದು ದಿನ ತನ್ನ ತಮ್ಮ ಮಾಡಿದ ತ್ಯಾಗ ಮತ್ತು ತೋರಿಸಿದ ಪ್ರೀತಿಗಾಗಿ ತನ್ನ ತಮ್ಮನ ಕೈಗಳನ್ನು ಪ್ರಾರ್ಥಿಸುವ ರೂಪದಲ್ಲಿ ಬರೆದು "Hands" ಎನ್ನುವ ಹೆಸರಿಡುತ್ತಾನೆ ಆಲ್ಬ್ರೆಕ್ಟ್. ಆ ಕೈ ಮತ್ತು ಅದರ ಹಿಂದಿನ ಕಥೆಯನ್ನು ಕೇಳಿದ ಜನ "Praying Hands" ಎನ್ನುವ ಹೆಸರಿಡುತ್ತಾರೆ.


   ಆಲ್ಬ್ರೆಕ್ಟ್ ನ ತಮ್ಮ ನಮಗೆ ನಿಮಗೆಲ್ಲರಿಗೂ ತ್ಯಾಗ ಮತ್ತು ಪ್ರೀತಿಗೊಂದು ಆದರ್ಶ. ಇಂದು ಅವನ ತಮ್ಮನ ಹೆಸರು ತಿಳಿದವರು ಕಡಿಮೆ. ಕೆಲವರು ಆಲ್ಬರ್ಟ್ ಎನ್ನುತ್ತಾರೆ. ಇನ್ನು ಕೆಲವರು ಇನ್ನೇನೋ ಹೇಳುತ್ತಾರೆ. ಆದರೆ ಅವನು ಮಾಡಿದ ತ್ಯಾಗ ಮತ್ತು ನೀಡಿದ ಪ್ರೀತಿ "Praying Hands" ಆಗಿ ಇಂದಿಗೂ ವಿಶ್ವದ ಮುಂದಿದೆ.

Tuesday, March 2, 2010

ಬಿ. ಎಂ.ಟಿ. ಸಿ. ಕಥೆಗಳು ... ಭಾಗ ೧

ಬಸ್ಸು ಸಾರ್ವಜನಿಕ ಸಾರಿಗೆಯಾಗಿರುವುದರಿಂದ ಹಲವು ಕಥೆಗಳ ಆಗರ. ಮೈ ಮುರಿದು ಹೋಗುವಷ್ಟು ಜನವಿದ್ದಾಗಲೂ ನಮಗೆ ಇಂತಹ ಕಥೆಗಳು ನಗು ತರಿಸುತ್ತವೆ. ಹಾಗಾಗಿ ಬಸ್ ಅನುಭವವನ್ನು ಬ್ಲಾಗ್ ಲೋಕಕ್ಕೆ ತರುವ ಒಂದು ಸಣ್ಣ ಪ್ರಯತ್ನ.

ಅವತ್ತೊಂದು ದಿನ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್. ಬಸ್ ಡ್ರೈವರ್ ಕೂಡ ಆ ಜಾಮ್ ನಲ್ಲಿ ಸೇರಿಕೊಂಡ. ಆಗ ಒಂದು ಕಾರು ಸುಂಯ್ ಅಂತ ಬಂದು ಪಕ್ಕದಲ್ಲಿ ನಿಂತಿತು.


ಬಸ್ ಬಿಡುತ್ತಿದ್ದ ಡ್ರೈವರ್ ಗೆ ರೇಗಿ ಹೋಯಿತು. ಕಾರ್ ನವನಿಗೆ ಕೇಳಿದ...

"ಕಾರ್ ನಲ್ಲಿ ಎಷ್ಟು ಜನ ಇದ್ದಾರೆ?"

ಆತನಿಗೆ ಅರ್ಥ ಆಗಿಲ್ಲ. "6" ಎಂದ.

"ನನ್ನ ಬಸ್ ನಲ್ಲಿ ಎಷ್ಟು ಜನ ಇದ್ದಾರೆ? " ಆ ಕಡೆಯಿಂದ "50" ಎನ್ನುವ ಉತ್ತರ ಬಂತು.

"50 ಜನ ಹಾಕಿಕೊಂಡು ನಾನು ಸ್ಟ್ರೇಟ್ ಆಗಿ ಬರ್ತಾ ಇದೀನಿ, ಆರು ಜನ ಇರುವ ನಿನ್ನ ಕಾರು ಯಾಕೆ ಅಡ್ಡಾದಿಡ್ಡಿ ಬರ್ತಾ ಇದೆ? ಬಸ್ ಅಡಿಗೆ ಬಿದ್ರೆ ನಿನ್ನ ಅಡ್ರೆಸ್ ಇರಲ್ಲ"

ನಿನ್ನ ಬಸ್ಸೆ ಅಡ್ಡಾ ದಿಡ್ಡಿ ಬರ್ತಾ ಇರೋದು. ನಾನು ಹಾಗೇ ಕರೆಕ್ಟಾಗಿ ಬರ್ತಾ ಇದೀನಿ.

ಏನ್ ಕರೆಕ್ಟಾಗಿ ಬರ್ತಾ ಇದೀಯ? ಮಗನೆ, ಎ.ಸಿ. ಹಾಕ್ಕೊಂಡು ಅಲ್ಲಾಡಿಸ್ಕೊಂಡು ಬಂದು ಬಿಡ್ತೀರ. ಬಸ್ ಅಡಿಗೆ ಬಿದ್ದು ನಮ್ಮನ್ನ ಜೈಲ್ ಗೆ ಹಾಕ್ತೀರ. ಬಂದ್ ಬಿಟ್ಟ ಹೇಳಕ್ಕೆ.

ಕಾರ್ ನವನು ಅಲ್ಲಿಗೆ ಚುಪ್... ಬಸ್ ಹಾಗೆ ಮುಂದಿನ ಸಿಗ್ನಲ್ ಕಡೆಗೆ ಚಲಿಸಿತು.

Friday, February 26, 2010

ಕೂತಲ್ಲೇ ...

ಹೀಗೆ ಹೊರಗಡೆ ನಡೆಯುತ್ತಿರುವಾಗ ಭಿಕ್ಷುಕನೊಬ್ಬ ಸಿಕ್ಕಿದ. ಭಿಕ್ಷೆ ಬೇಡುವವರು ಹಿಂದೆ "ಧರ್ಮ ಕೊಡಿ" ಅಂತ ಹೇಳುತ್ತಿದ್ದರು. ಯಾಕೆ ಅಂದರೆ ಅವರವರ  ಧರ್ಮವನ್ನು ಕಾಪಾಡುವುದು ಅವರವರ ಕರ್ತವ್ಯ. ನಿಮ್ಮ ಕರ್ತವ್ಯ ಮಾಡಿ ಎನ್ನುವುದಕ್ಕಾಗಿ ಧರ್ಮ ಎನ್ನುವ ಪರಿಪಾಟವಿತ್ತು. ಈಗ ಕೊಡಣ್ಣ ಎನ್ನುವವರೆಗೆ ಬಂದಿದೆ. ಮುಂದೇನೋ ಗೊತ್ತಿಲ್ಲ. ಹಾಗೆ ಕೆಲವು ಪ್ರಶ್ನೆಗಳು ನನ್ನ ಮನಃ ಪಟಲ ದಲ್ಲಿ ಹಾಡು ಹೋದವು ನೋಡಿ. ಅದಕ್ಕೊಂದು ತರಲೆ ಉತ್ತರವೂ ಹೊಳೆದು ಬಿಡುವುದೇ !!


ಕೂತಲ್ಲೇ ಹಣ ಬರಬೇಕಿದ್ದರೆ ಏನು ಮಾಡಬೇಕು?


ಕೂತಲ್ಲೇ ಕೈ ಚಾಚಿ ಭಿಕ್ಷೆ ಬೇಡಬೇಕು.

ಲೋನಿಗು ಭಿಕ್ಷೆಗೂ ಏನು ವ್ಯತ್ಯಾಸ?


ಲೋನು ಕೊಟ್ಟವರು ಕೆಲವೇ ದಿನಗಳಲ್ಲಿ ಅಟ್ಟಿಸಿಕೊಂಡು ಬರುತ್ತಾರೆ. ಒಮ್ಮೆ ಭಿಕ್ಷೆ ಕೊಟ್ಟವರು ಮತ್ತೊಮ್ಮೆ ತಿರುಗಿಯೂ ನೋಡುವುದಿಲ್ಲ

ಛತ್ರದಲ್ಲಿ ಬಿಟ್ಟಿ ಊಟ ಮಾಡುವುದಕ್ಕೂ ಭಿಕ್ಷೆ ಊಟಕ್ಕೂ ಏನು ವ್ಯತ್ಯಾಸ?


ಬಿಟ್ಟಿ ಊಟ ಮಾಡಿದವನಿಗೆ ಹಾಲು ಅನ್ನ; ಭಿಕ್ಷೆ ಎತ್ತಿದವನಿಗೆ ತಂಗಳನ್ನ.

Saturday, January 30, 2010

ರಿಸಲ್ಟ್ ಎಂಬ ಟೆನ್ಷನ್ …

ಇತ್ತೀಚೆಗೆ ನನ್ನ ಹುಡುಗನೊಬ್ಬ ಬಂದು, ಸರ್ ನಮ್ಮ ರಿಸಲ್ಟ್ ಬಂತು. ಪಾಸ್ ಆದೆ ಎಂದಾಗ ನಾನು ನನ್ನ ಹಳೆಯ ಪುಟಗಳನ್ನು ತಿರುಗಿಸಿ ಹಾಕುವ ಅವಕಾಶ ಒದಗಿ ಬಂತು. ನನಗಾಗ ಅನಿಸಿದ್ದು, ಎಷ್ಟೋ ತಲೆನೋವುಗಳನ್ನು ಮರೆತೇ ಬಿಟ್ಟಿದ್ದೇನಲ್ವಾ? ಅಂತ. ಬಹುಶಃ ಅವುಗಳಿಗೂ ಒಂದು ಟ್ರಿಗರ್ ಇಲ್ಲದೆ ಅವು ಕೂಡ ನಮ್ಮ ಮನಃ ಪಟಲದಲ್ಲಿ ಹಾದು ಹೋಗುವುದಿಲ್ಲವೇನೋ. ಅಥವಾ ಅಂದಿನ ಜಾಗೃತ ಸ್ಥಿತಿ ಇಂದಿನ ಸ್ವಪ್ನ ಸ್ಥಿತಿಗೆ ಬಂದು ಮುಟ್ಟಿದೆಯೇನೋ ಎಂದು ಯೋಚಿಸುತ್ತಿರುತ್ತೇನೆ. ಇಂದಿಗಿರುವ ಸವಾಲೇ ಬೇರೆ. ಅಂದು ನದಿಯ ತೆರೆಗೆ ಹೆದರುತ್ತಿದ್ದವನು ಇಂದು ಸಾಗರದ ಅಲೆಗಳಿಗೆ ಎದೆಯೊಡ್ಡಿ ನಿಂತಿದ್ದೇನೆ. ಹಲವು ಟೆನ್ಷನ್ ಗಳಿಗೆ ಪ್ರತಿದಿನವೂ ಮುನ್ನುಡಿ ಬರೆಯುತ್ತಿದ್ದೇನೆ.


ಅದೊಂದು ಕಾಲವಿತ್ತು, ನಾವು ಇಂಜಿನಿಯರಿಂಗ್ ಓದುತ್ತಿದ್ದ ಕಾಲದ ಹಾಸ್ಟೆಲ್ ಜೀವನ. ಅಲ್ಲಿರುವ ಒಬ್ಬೊಬ್ಬನ ಮೂಢ ನಂಬಿಕೆಗಳು ಇಂದಿಗೂ ನಗು ತರಿಸುತ್ತವೆ. ಒಬ್ಬೊಬ್ಬನ ಬಾಯಿಯಿಂದ ಬರುತ್ತಿದ್ದ ಮುತ್ತಿನ ಹನಿ(ಬೈಗುಳ)ಗಳು ಇಂದಿಗೂ ನಮಗೆ ಹಿಂದಿನ ದಿನಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಜಗಳ, ಒಳ ಜಗಳಗಳ ಒಗಟು ಬಿಡಿಸಲಾಗದಂತಹ ಜಾಗ ಅದು. ಅದೊಂದು ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಂಕರ, ಭೀಭತ್ಸ, ಅದ್ಭುತ ಮತ್ತು ಶಾಂತ ಇವುಗಳಿಂದ ಕೂಡಿದ ನವರಸಗಳ ಬೀಡು.

ಹೀಗಿರುವಾಗ ಎಲ್ಲರಿಗೂ ತಲೆನೋವು ತರಿಸುತ್ತಿದ್ದುದು ರಿಸಲ್ಟ್. ಪರೀಕ್ಷೆಯಲ್ಲಿ ಬರೆದ ಉತ್ತರ ಪತ್ರಿಕೆಗಳಿಗೆ ಬ್ರಹ್ಮ ಬರೆದ ಹಣೆ ಬರಹ. ಅದನ್ನು ತಿದ್ದಲು ಸಾಧ್ಯವಿಲ್ಲ ಎನ್ನುವವನು ಮನಸ್ಸಿಗೆ ನೋವಾದಾಗಲೂ ಮುಂದೆ ಮುಂದೆ ಹೋಗುತ್ತಾನೆ. ಬದಲಿಸಲು ಹೋದವನು ನೇಣಿಗೆ ಶರಣು. ಬಹುಶಃ ಪರೀಕ್ಷೆಗಿಂತಲೂ ರಿಸಲ್ಟ್ ಒಂದು ಬಿಸಿ ಬಿಸಿ ವಿಷಯ. ಯಾಕೆಂದರೆ ಯಾರೋ ಒಬ್ಬ ಗಾಳಿಯಲ್ಲಿ ರಿಸಲ್ಟ್ ಅಂತೆ ಎಂದು ಸುದ್ದಿ ಬಿಟ್ಟಿರುತ್ತಾನೆ. ಅಲ್ಲಿಗೆ ಟೆನ್ಶನ್ ಆರಂಭ. ಕೈಯಲ್ಲಿದ್ದ ಉಗುರು ಚೂರು ಚೂರು. ತಲೆಯಲ್ಲಿದ್ದ ಕೂದಲು ಚೆಲ್ಲಾಪಿಲ್ಲಿ. ಕೆಲವು ವೀಕ್ ಹೃದಯದವರ ಕಷ್ಟ ನೋಡಲಾಗುವುದಿಲ್ಲ. ಅವರು ರೋಲ್ ನಂಬರ್ ಅನ್ನು ಬೇರಯವರಿಗೆ ಹೇಳಿ ಕಣ್ಣೀರಿಗೆ ಶರಣಾಗಿರುತ್ತಾರೆ. ಮೊದಲ ಸೆಮ್ ನಲ್ಲಿ ಫೇಲ್ ಆದವನ ಕಡೆ ನೋಡದಿರುವುದೇ ಲೇಸು. ಆತನಿಗದು ಮೊದಲ ಬಾರಿಗೆ ಸೋತ ಅನುಭವ. ಆದರೆ ಅವನಿಗೆ ವೇದಾಂತ ಹೇಳಲು ಬೇರೆ ಸೋತು ಗೆದ್ದವರು ಇರುತ್ತಾರೆ ಬಿಡಿ. ಅದೊಂದೇ ಸಮಾಧಾನ.

ಈಗಿನದು ಎಲ್ಲಾ ಬ್ರಾಡ್ ಬ್ಯಾಂಡ್ ಯುಗ. ಆಗ ನಮಗೆ ಇದ್ದುದ್ದು ಅತಿ ಕಡಿಮೆ ವೇಗದ ನೆಟ್ ವರ್ಕ್. ಎಲ್ಲರೂ ಬಂದು ರಿಸಲ್ಟ್ ನೋಡಿದಾಗ ವಿ ಟಿ. ಯು. ವೆಬ್ ಸೈಟ್ ಢಮಾರ್!. ಮತ್ತೆ ಟೆನ್ಶನ್. ಆ ಕಾಲದಲ್ಲಿ ಹೆಚ್ಚಿನವರಲ್ಲಿ ಇಂಟರ್ನೆಟ್ ಕನೆಕ್ಷನ್ ಇರಲಿಲ್ಲ. ಎಲ್ಲದಕ್ಕೂ ಇದ್ದದ್ದು ಬ್ರೌಸಿಂಗ್ ಸೆಂಟರ್. ಆತನಿಗೆ ಖುಷಿಯೋ ಖುಷಿ. ತಲೆಗೆ 20 ರಂತೆ ರಿಸಲ್ಟ್ ಚಾರ್ಜ್ ಮಾಡಿ ಬಿಡುತ್ತಿದ್ದ. ಮರುದಿನ ರಿಸಲ್ಟ್ ಬರುವ ಖಾತರಿಯಿದ್ದರೂ ಐದು ನಿಮಿಷದ ಕೆಲಸಕ್ಕೆ 20 ರೂ. ಕೊಟ್ಟಾದರೂ ಕೂಡಲೆ ನೋಡುವವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ ಬಿಡಿ. ಮಧ್ಯ ರಾತ್ರಿಯಲ್ಲಿ ಎದ್ದು ಬ್ರೌಸಿಂಗ್ ಸೆಂಟರ್ ಗೆ ನುಗ್ಗಿದ ಘಟನೆಗಳಿವೆ. ಕೊನೆಗೆ ಬಂದು ಮಗಾ ಡಿಸ್ಟಿ, ಮಗಾ ಒಂದು ಹೋಯ್ತು, ಮಗಾ ಗೋಲ್ಡ್ (35) ಎಂದು ಬೇವು ಬೆಲ್ಲ ಸವಿಯುವ ಸಮಯ ಇಂದಿಗೂ ಮನಸ್ಸಿನಲ್ಲಿ ಹಾದು ಹೋಗುತ್ತದೆ.

ಹತ್ತರಲ್ಲಿ ಹನ್ನೊಂದು ಎಂಬಂತೆ ಹಲವು ತಲೆನೋವುಗಳ ನಡುವೆ ರಿಸಲ್ಟ್ ನ ಟೆನ್ಷನ್ ಕೂಡ ನಮಗೆ ಆಗ ಅನಿವಾರ್ಯ. ಇಂದು ಅದೊಂದು ನಗು ತರಿಸುವ ಸಮಯ. ಒಳ್ಳೆಯದಾಗಿರಲಿ ಕೆಟ್ಟದಿರಲಿ ನಾವಿಂದು ನಗಲೇ ಬೇಕು. ಯಾಕೆಂದರೆ ನಾವಿಂದು ಆ ಗಡಿ ದಾಟಿದ್ದೇವೆ. ನಾವಿಂದು ಸಸಿ ದಾಟಿ ಮರವಾಗಿದ್ದೇವೆ. ಮರದ ತುಂಬೆಲ್ಲ ಹಸಿದವನಿಗೆ ಹಣ್ಣುಗಳು, ದಣಿದವನಿಗೆ ನೆರಳು, ಕಡಿದವನಿಗೆ ಕ್ಷಮೆ ಎಲ್ಲವೂ ನಮ್ಮಲ್ಲಿದೆ. ಹಣ್ಣಿಗಾಗಿ ಎಸೆದ ಕಲ್ಲು ನಮಗೂ ತಾಕಿದೆ. ಮನಸ್ಸು ಕ್ಷುಬ್ಧಗೊಂಡರೂ ಸಾವರಿಸಿಕೊಂಡು ಎದ್ದು ನಿಂತಿದ್ದೇವೆ. ಒಳ್ಳೆಯದಿರಲಿ ಕೆಟ್ಟದಿರಲಿ ನಮ್ಮಲ್ಲಿ ದಯೆ ಇರಬೇಕು. ದಯೆಯೇ ಧರ್ಮದ ಮೂಲವಯ್ಯ ಎಂದವರು ಬಸವಣ್ಣ. ಕ್ಷಮೆ ಇಲ್ಲದವರು ಯಾರು ದೊಡ್ಡದವರಾಗಿದ್ದಾರೆ ಹೇಳಿ? ಕ್ಷಮೆ ಇರಲಿ ಆದರೆ ಪರಿಸ್ಥಿತಿಗಳ ಮರೆವು ಖಂಡಿತ ಸಲ್ಲ. ಮರೆವು ನಮ್ಮನ್ನು ಬಿದ್ದ ಹೊಂಡಕ್ಕೆ ಮತ್ತೆ ತಳ್ಳುತ್ತದೆ.