Saturday, July 25, 2009

ಖಾದಿಯ ಕಥೆಯೇಕೆ ಹೀಗೆ?

ಒಂದು ಕಾಲದಲ್ಲಿ ಭಾರತದ ಬಡವರ ಮಾನ ಮುಚ್ಚುವ ಕೆಲಸ ಮಾಡಿದ್ದ ಖಾದಿ ಬಟ್ಟೆಯ ಕಥೆ ಇಂದು ಏನಾಗಿದೆ? ಏನಾಗಿರಬಹುದು? ಅದನ್ನು ವರ್ಣಿಸ ಹೊರಟರೆ ಅದೇ ಒಂದು ವ್ಯಥೆಯ ಕಥೆ.

ಕಳೆದ ವಾರ ಹೀಗೆ ನನಗೆ ಹಲವು ದಿನಗಳ ಕನಸಾಗಿದ್ದ ಖಾದಿ ಬಟ್ಟೆಯನ್ನು ಕೊಂಡುಕೊಳ್ಳುವ ಮನಸ್ಸಾಯಿತು. ನಾನು ನನ್ನ ಏಳನೇ ತರಗತಿಯಲ್ಲಿರುವಾಗ ಖಾದಿ ಪಂಚೆಯನ್ನು ಬಳಸುತ್ತಿದ್ದೆ. ನನಗೆ ಉಳಿದ ಪಂಚೆಗಳು ಸುಮಾರು ಆರು ತಿಂಗಳು ಬಂದರೆ, ಈ ಪಂಚೆ ನನಗೆ ಒಂದೂವರೆ ವರ್ಷ ಬಂದಿತ್ತು. ಈಗ ನನಗೆ ಅರ್ಥವಾಗುತ್ತಿದೆ ಗಾಂಧೀಜಿಯವರ ಯೋಚನೆಯ ಮಹತ್ವ. ಒಂದು ಸಲ ತೆಗೆದುಕೊಂಡರೆ ವರ್ಷಗಟ್ಟಲೆ ಬಾಳುವ ಖಾದಿ ಬಟ್ಟೆಯ ಖದರ್ರೇ ಬೇರೆ. ಅಂತಹ ಖಾದಿ ಬಟ್ಟೆ ಯಾಕೆ ಈಗ ಹೀಗಾಗಿ ಹೋಗಿದೆ?

ನಮ್ಮ ದೇಶದಲ್ಲಿ ಗಾಂಧೀಜಿಯವರು ಸ್ವ ಉದ್ಯೋಗವನ್ನು ಪ್ರೇರೇಪಿಸುವುದಕ್ಕಾಗಿ ಆರಂಭಿಸಿದ ಖಾದಿ ಬಟ್ಟೆ ಆಂದೋಲನವನ್ನು ಸ್ವಾತಂತ್ರ್ಯ ಸಿಕ್ಕಿ 50 ವರ್ಷಗಳಲ್ಲೇ ನಮ್ಮ ಸರಕಾರ ಕಿತ್ತು ಕಸದ ಬುಟ್ಟಿಗೆ ಬಿಸಾಕಿ ಪಾಶ್ಚಾತ್ಯ ದೇಶಗಳಿಗೆ ಮಣೆ ಹಾಕಬಹುದು ಎಂದು ಬಹುಶಃ ಯಾರೂ ಭಾವಿಸಿರಲಿಕ್ಕಿಲ್ಲ. ಇಂದು ನೀವು ಖಾದಿ ಬಟ್ಟೆ ಕೊಳ್ಳಲು ಹೋದರೆ ಒಂದು ಅಂಗಿಗೆ 500 ರೂ. ಗಳಿಗಿಂತ ಕಡಿಮೆ ಇಲ್ಲ. ಇಂದು ಗಾಂಧೀಜಿ ಬಂದಿದ್ದರೆ ಖಾದಿಯನ್ನು ಬಿಸಾಕಿ ಸೂಟು ತೊಡುತ್ತಿದ್ದರೇನೋ? ಅದೇ ಇಂಗ್ಲಂಡ್ ನ ಮಳಿಗೆಗಳು 300 ರೂ.ಗೆ ಉತ್ತಮ ಮಟ್ಟದ ಬಟ್ಟೆಗಳನ್ನು ಕೊಡುತ್ತದೆ. ನಾನು ಸ್ವ-ಉದ್ಯೋಗವನ್ನು ದೂರುತ್ತಿಲ್ಲ. ನನಗೆ ಬೇಸರವಾಗುತ್ತಿರುವುದು ಸರಕಾರದ ಪಕ್ಷಪಾತ ಧೋರಣೆ. ಇಂದು ಕರ ಹಾಕಬೇಕಾದರೆ, ಯಾವ ಮಟ್ಟಿಗೆ ಇಳಿಯಲು ಸಹ ಹೇಸದ ಸರಕಾರ, ಈ ಖಾದಿ ಉದ್ಯಮದ ಬಗ್ಗೆ ಸಬ್ಸಿಡಿಯನ್ನು ಕೊಟ್ಟು ಕಾಳಜಿಯನ್ನು ವಹಿಸಬಹುದಿತ್ತು. ಕಡಿಮೆ ಬೆಲೆಯಲ್ಲಿ ಸಿಕ್ಕರೆ ಜನರು ಸಹ ಮುಂದೆ ಬಂದು ತೆಗೆದು ಕೊಳ್ಳುತ್ತಾರೆ. ಖಾದಿ ಬಟ್ಟೆ ತೆಗೆದುಕೊಳ್ಳುವ ಆಸೆಯಿಂದ ಜನ ಬಂದರೆ ಆ ಆಸೆಯ ಬಳ್ಳಿಯನ್ನೇ ಮುರುಟಿ ಹಾಕುವ ಕೆಲಸ ಇಂದು ನಡೆದಿದೆ. ಹೀಗೆ ಖಾದಿ ಬಟ್ಟೆಯ ಬೆಲೆ ಮೇಲೆ ಹೋಗುತ್ತಿದ್ದರೆ ಖಾದಿ ಸರಳತೆಯ ಸಂಕೇತ ಆಗುವುದಿಲ್ಲ; ಬದಲಿಗೆ ಆಡಂಬರವಾಗುತ್ತದೆ. ಇಂದು ಖಾದಿ ಬಟ್ಟೆ ಜನ ಸಾಮಾನ್ಯ ಉಡುವ ಬಟ್ಟೆ ಆಗಿರದೆ ಬರಿ ಶ್ರೀಮಂತರು ಕೊಳ್ಳುವ ಬಟ್ಟೆ ಆಗುವ ಕಡೆ ಹೆಜ್ಜೆ ಇಟ್ಟಿದೆ ಎಂದಾದರೆ, ಅದಕ್ಕೆ ನಮ್ಮ ಸರಕಾರವೇ ನೇರ ಹೊಣೆ. ನಂದನ್ ನೀಲಕಿಣಿಗೆ ಖಾದಿ ಹಾಕು ಎಂದು ಹೇಳುವ ಜನ, ಇಂದು ಖಾದಿಯ ಬೆಲೆ ಯಾಕೆ ತಿಳಿಯದೆ ಹೋದರೋ?


ನನಗೆ ಇನ್ನೊಂದು ತಪ್ಪು ಹೆಜ್ಜೆ ಕಾಣಿಸಿದ್ದೇನೆಂದರೆ, ನಾನು ಹೋಗಿದ್ದ ಮಲ್ಲೇಶ್ವರಂ ನ ಖಾದಿ ಭಂಡಾರ್ ನಲ್ಲಿ ಒಂದೇ ಅಳತೆಯ ಬಟ್ಟೆ ತೆಗೆದುಕೊಳ್ಳಬೇಕೆಂದರೆ 15 ನಿಮಿಷ ಕಾಯಬೇಕು. ಯಾಕೆಂದರೆ ಬಟ್ಟೆಗಳು ಸರಿಯಾಗಿ ಜೋಡಿಸಲ್ಪಟ್ಟಿಲ್ಲ. ಒಂದು ಅಂಗಿ ಒಂದು ಕಡೆ ಇದ್ದರೆ, ಇನ್ನೊಂದು ಇನ್ನೆಲ್ಲೋ. ಇದೇಕೆ ಈ ಥರ ಇಟ್ಟಿದ್ದೀರ? ಎಂದು ಕೇಳಿದರೆ, ನಮ್ಮ ಸೆಕ್ರೆಟರಿ ಹತ್ತಿರ ಹೇಳಿ ಸರಿ ಮಾಡಿಸಬೇಕು ಸರ್ ಎನ್ನುವ ಉತ್ತರ ಬರುತ್ತದೆ. ಈಗಿನ ಗ್ರಾಹಕರು ಕಾಯುವುದನ್ನು ಇಷ್ಟಪಡುವುದಿಲ್ಲ ಮತ್ತು ಗ್ರಾಹಕ ಬೇಡ ಎಂದು ಯೋಚನೆ ಮಾಡುವ ಮೊದಲು ವಸ್ತುವನ್ನು ತೋರಿಸಿದವನು ಬುದ್ದಿವಂತ. ಗ್ರಾಹಕನಿಗೆ ಸಮಯ ಕೊಟ್ಟರೆ, ಆತ ಬೇಡ ಎಂದು ನಿರ್ಧಾರ ಮಾಡಿ ಬಿಟ್ಟಾಗಿರುತ್ತದೆ. ಈ ಅವ್ಯವಸ್ಥೆ ಕೂಡ ಖಾದಿಗೆ ಒಂದು ಕಪ್ಪು ಚುಕ್ಕೆ.

ಇಷ್ಟೆಲ್ಲ ಕಷ್ಟ ನಷ್ಟಗಳನ್ನು ಅನುಭವಿಸುತ್ತಿರುವ ಖಾದಿ ಉದ್ಯಮ, ಒಂದು ಕಾಲದಲ್ಲಿ ಆನೇಕ ಆಂದೋಲನಗಳಿಗೆ ಮುನ್ನುಡಿ ಬರೆದ ಖಾದಿ ಉದ್ಯಮ ಮುಂದಿನ ದಿನಗಳಲ್ಲಿ ವಸ್ತು ಸಂಗ್ರಹಾಲಯದಲ್ಲಿ ಇಡುವಂತಹ ಸ್ಥಿತಿಗೆ ಬರುವ ಮೊದಲು ಸರಕಾರ ಎಚ್ಚೆತ್ತುಕೊಂಡರೆ, ಜನತೆಗೆ ಅದೊಂದು ಮಹದುಪಕಾರ.

No comments: