Sunday, July 26, 2009

ಸ್ವರ್ಗಂ ಗಚ್ಛಂತು ...

ಕೊಗ್ಗ ತನ್ನ ಹೈಸ್ಕೂಲಿನಲ್ಲಿ ಸ್ವಲ್ಪ ಅಂಕಗಳು ಹೆಚ್ಚು ಬರುತ್ತವೆ ಎನ್ನುವ ಕಾರಣದಿಂದ ಸಂಸ್ಕೃತವನ್ನು ಆಯ್ದುಕೊಂಡಿದ್ದ. ಅದು ಕಾಲೇಜಿನಲ್ಲೂ ಮುಂದುವರಿದಿತ್ತು. ಕೊಗ್ಗನಿಗೆ ಅಮ್ಮ ಇರಲಿಲ್ಲ, ಅಪ್ಪ ಮಂಗುರನಿದ್ದ. ಕೊಗ್ಗನ ಇಂದಿನ ಸ್ಥಿತಿಗೆ ಅವನ ಅಮ್ಮ ನೀಡಿದ ಕೊಡುಗೆ ದೊಡ್ಡದಾಗಿತ್ತು. ಅದನ್ನು ಆತ ಎಂದಿಗೂ ಮರೆಯಲಾರ. ಕೊಗ್ಗ ತನ್ನ ಅಮ್ಮನ ನೆನಪಿಗೆ ಪ್ರತಿವರ್ಷ ಶ್ರಾದ್ಧ ಹಾಕುವ ಪರಿಪಾಠ ಇಟ್ಟುಕೊಂಡಿದ್ದ. ಹಾಗೆ ಅವನು ಹಾಕುತ್ತಿದ್ದ ಶ್ರಾದ್ಧದಲ್ಲಿ ನಡೆದಂತಹ ಒಂದು ಘಟನೆ.

ಕೊಗ್ಗನ ಮನೆಯಲ್ಲಿ ಶ್ರಾದ್ಧ ನಡೆಸುತ್ತಿದ್ದ ಪುರೋಹಿತರು ಸ್ವಲ್ಪ ಅನುಕೂಲ ಶಾಸ್ತ್ರದವರು. 2 ಗಂಟೆ ಎಂದರೆ ಸಮಯಕ್ಕೆ ಸರಿಯಾಗಿ ಎಲೆ ಇಟ್ಟು ಊಟಕ್ಕೆ ಕೂತು ಬಿಡಬೇಕು ಅಂಥವರು. ಶ್ರಾದ್ಧದ ಕ್ರಮಗಳು ಕೊಗ್ಗನಿಗೆ ಅರ್ಥವಾಗುವುದಿಲ್ಲವಾದರೂ ಆತ ಪುರೋಹಿತರ ಮಂತ್ರಕ್ಕೆ ಕಿವಿ ಕೊಟ್ಟು ಕೇಳುತ್ತಾನೆ. ಕೆಲವು ಸಲ ಅವನಿಗೆ ಒಂದು ದರ್ಭೆ ಇಟ್ಟು ಆಮಂತ್ರಣ ಮಾಡುವುದು ವಿಚಿತ್ರ ಎನಿಸುತ್ತದೆ. ಏನೋ ಒಂದು ಹುಲ್ಲು, ಅಡಿಕೆ ಇಟ್ಟು ಅನ್ನ ಹಾಕಿ, ದಕ್ಷಿಣೆ ಹಾಕಿ ಎಂದರೆ ಯಾವನಿಗೆ ಅಸಮಾಧಾನ ಆಗದೆ ಇರುತ್ತದೆ ಹೇಳಿ. ನಿಜವಾಗಿ ಹಿಂದೆ ಆ ಜಾಗೆಗಳಲ್ಲಿ ಬ್ರಾಹ್ಮಣರು ಕೂರುತ್ತಿದ್ದರು. ಈಗೀಗ ಪ್ರತಿ ತಲೆಗೆ 1000ರೂ. ಕೊಟ್ಟರೂ ಬರುವವರಿಲ್ಲ. ಶ್ರಾದ್ಧದ ಊಟಾನ? ಎನ್ನುತ್ತಾರೆ. ಕ್ರಮ ಪ್ರಕಾರವಾಗಿ ಮಾಡುವಾಗ ಚಾಣಕ್ಯ ನೀತಿ, ಸುಭಾಷಿತಗಳಲ್ಲಿ ಬರುವ ಸಂಸ್ಕಾರಯುಕ್ತವಾದ ಬ್ರಾಹ್ಮಣ(ವಿದ್ಯೆಯಲ್ಲಿ ಪರಿಣತಿ ಹೊಂದಿದವರು) ಪೂಜೆಯೆಲ್ಲ ಶ್ರಾದ್ಧ ಮಾಡುವಾಗ ಬರುತ್ತವೆ. ಈಗಿನ ಬ್ರಾಹ್ಮಣರಲ್ಲಿ ಹಲವರು ವೈದಿಕ ಬ್ರಾಹ್ಮಣರಲ್ಲ ಬಿಡಿ.ಅವರೆಲ್ಲ ಹುಟ್ಟು ಬ್ರಾಹ್ಮಣರು, ಆಚಾರದಲ್ಲಿ ಬ್ರಾಹ್ಮಣರಲ್ಲ.

ಆ ದಿನ ಉಂಡೆ ರೀತಿಯಲ್ಲಿ ನೈವೇದ್ಯವನ್ನು ಮಾಡಿ ಎಲ್ಲ ಕೆಲಸ ಕಾರ್ಯವನ್ನು ಮಾಡಿದ ಕೊಗ್ಗನಿಗೆ ಕೊನೆಗೆ ಪುರೋಹಿತರಿಂದ ಅಚ್ಚರಿ ಕಾದಿತ್ತು. ಎಲ್ಲ ಕೆಲಸ ಕಾರ್ಯಗಳನ್ನು ಮಾಡಿದ ನಂತರ ನೆಲದ ಮೇಲಿನ ಎಳ್ಳನ್ನು ಮೇಲೆ ಹಾರಿಸಿ, "ಸರ್ಗಂ ಗಚ್ಛಂತು ಮಾತರಃ" ಎನ್ನುವ ಪರಿಪಾಠವಿದೆ. ಪುರೋಹಿತರು "ಸ್ವರ್ಗಂ ಗಚ್ಛಂತು ಪಿತರಃ" ಎಂದು ಬಿಡೋದ? ಏನು ಭಟ್ರೆ, ಪಿತರಃ ಅಂತ ಹೇಳಿದಿರಲ್ಲ ಎಂದ ಕೊಗ್ಗ. ಭಟ್ಟರಿಗೆ ಆಶ್ಚರ್ಯ!! ಕೊಗ್ಗನಿಗೆ ಅರ್ಥವಾಗಬಹುದೆಂದು ಅವರಿಗೆ ತಿಳಿದಿರಲಿಲ್ಲ. ಥಟ್ಟನೆ ಮಂಗುರನತ್ತ ನೋಡಿದರು. ಮಂಗುರ ಪಾಪ!!, ಏನೋ ಕೆಲಸದಲ್ಲಿ ಪುರೋಹಿತರ ಮಾತು ಕೇಳಿಸಿಕೊಂಡಿರಲಿಲ್ಲ. ಖುಷಿಯಾದ ಪುರೋಹಿತರಿಂದ ಬಂತೊಂದು ಸಮರ್ಥನೆ,"ಸತ್ತ ಮೇಲೆ ಎಲ್ಲರೂ ಪಿತೃಗಳೇ.. ತಲೆ ಕೆಡಿಸಿಕೊಳ್ಳಬೇಡ" . ಆದರೂ ಬದುಕಿರುವಾಗಲೇ ಇರುವ ತಂದೆಯನ್ನು ಸ್ವರ್ಗಕ್ಕೆ ಕಳುಹಿಸಿದ ಪುರೋಹಿತರ ಕ್ರಮ ಎಷ್ಟು ಸರಿ? ಅಲ್ಲವೆ?